ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಶನಿವಾರ ಬಿರುಸಿನ ಪ್ರಚಾರ ನಡೆಸಿದರು.
ತಾಲ್ಲೂಕಿನ ಚಿಮಕೋಡ್, ಮಾಳೆಗಾಂವ, ಜನವಾಡ ಗ್ರಾಮಗಳಲ್ಲಿ ಪಾದಯಾತ್ರೆ, ಸಭೆ ನಡೆಸಿ ಮತಯಾಚಿಸಿದರು.
‘ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಾಗಿರುವ ಅಭಿವೃದ್ದಿಯನ್ನು ನೋಡಿ ಮತ ನೀಡಿ. ದೇಶದ ಅಭಿವೃದ್ದಿಗೆ, ರಕ್ಷಣೆಗೆ ಮೋದಿಯವರು ಬೇಕಾಗಿದ್ದಾರೆ’ ಎಂದು ಹೇಳಿದರು.
ನನ್ನ ವಿರುದ್ಧ ಸ್ಪರ್ಧಿಸಲು ಸಚಿವ ಈಶ್ವರ ಬಿ. ಖಂಡ್ರೆಯವರಿಗೆ ಧೈರ್ಯವಾಗಲಿಲ್ಲ. ಬೇರೆಯವರನ್ನು ಕಣಕ್ಕಿಳಿಸಲಿಲ್ಲ. ಅವರ ಪಕ್ಷದಲ್ಲಿನ ಹಿರಿಯ ಮುಖಂಡರನ್ನು ಮೂಲೆಗುಂಪು ಮಾಡಿ, ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಖಂಡ್ರೆ ಒಬ್ಬ ಸ್ವಾರ್ಥ ರಾಜಕಾರಣಿ ಎಂದು ಜರಿದರು.
ಖಂಡ್ರೆಯವರ ಮಗನ ಮೇಲಿನ ವ್ಯಾಮೋಹದಿಂದ ಕಾಂಗ್ರೆಸ್ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ. ಅವರಿಗೆ ಸತ್ಯ–ಸುಳ್ಳಿ ವ್ಯತ್ಯಾಸ ಗೊತ್ತಿಲ್ಲ. ನಾನು ಹಲವಾರು ಕೆಲಸ ಮಾಡಿದರೂ ಏನು ಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ ಮಾತನಾಡಿ, ಖೂಬಾ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳು ಹಿಂದೆ ಯಾರೂ ಮಾಡಿಲ್ಲ. ಇನ್ನೊಂದು ಸಲ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಬೀದರ್ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಖೂಬಾ ಅವರನ್ನು ಗೆಲ್ಲಿಸುವುದು ಅವಶ್ಯಕ ಎಂದರು.
ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ಮುಖಂಡರಾದ ಎಮ್.ಜಿ.ಮುಳೆ, ಪೀರಪ್ಪ ಯರನಳ್ಳಿ, ಉಪೇಂದ್ರ ದೇಶಪಾಂಡೆ, ವಿಶ್ವನಾಥ ಪಾಟೀಲ ಮಾಡಗೂಳ, ಅರವಿಂದ ಪಾಟೀಲ ಚಿಲ್ಲರ್ಗಿ, ವಿಜಯಕುಮಾರ ಪಾಟೀಲ ಗಾದಗಿ, ಸುರೇಶ ಮಾಶೆಟ್ಟಿ, ಅಶೋಕ ಪಾಟೀಲ, ದೀಪಕ್ ಅಲಿಯಂಬರ್, ರವಿ ಚಿನ್ನಪ್ಪನೊರ, ಶಿವಕುಮಾರ ಸ್ವಾಮಿ, ಸಂದೀಪ ಪಸರ್ಗೆ, ದಿನೇಶ ಮೂಲಗೆ, ನಿಜಲಿಂಗಪ್ಪ ಪಾಟೀಲ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.