ಬೀದರ್: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ) ಆರೋಪಿಸಿದೆ.
ಈ ಸಂಬಂಧ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಸಲ್ಲಿಸಿ ಒತ್ತಾಯಿಸಿದರು.
2006–07ರಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದೆ. ವಿವಿಧ ಕಾಮಗಾರಿಗಳು, ಕಾರ್ಮಿಕರಿಂದ ವಂತಿಕೆ ಶುಲ್ಕ ಪಡೆದಿದ್ದು, ಕಲ್ಯಾಣ ಮಂಡಳಿಯಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹವಾಗಿದೆ. ಅದನ್ನು ಕಾರ್ಮಿಕರ ಮಕ್ಕಳ ಶಿಕ್ಷಣ, ವಿವಾಹಕ್ಕೆ ಸಹಾಯ ಧನ, ಅಪಘಾತ ಪರಿಹಾರ, ಮರಣ ಪರಿಹಾರ ಸೇರಿದಂತೆ ಇತರೆ ಸಂದರ್ಭದಲ್ಲಿ ವಿತರಿಸಬೇಕು. ಆದರೆ, ಅದನ್ನು ದುಂದು ವೆಚ್ಚ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರ ಆರೋಗ್ಯ ತಪಾಸಣೆಯ ನೆಪದಲ್ಲಿ ಕೋಟಿ ಕೋಟಿ ಹಣ ಲಪಟಾಯಿಸಲಾಗಿದೆ. ಕಿಟ್ಗಳ ವಿತರಣೆಯಲ್ಲಿ ಅಕ್ರಮ ನಡೆದಿದೆ. ಮೇಲಿಂದ ಮೇಲೆ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಅನೇಕ ಕಾರ್ಮಿಕರ ಹೆಸರುಗಳು ನವೀಕರಣಗೊಂಡಿಲ್ಲ. ನೈಜ ಕಾರ್ಮಿಕರನ್ನು ಗುರುತಿಸಿ ಸೇರಿಸಬೇಕು. ಹಣದ ದುರುಪಯೋಗ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವ ಅಧ್ಯಕ್ಷ ಅಲಿ ಅಹಮ್ಮದ್ ಖಾನ್, ಜಿಲ್ಲಾ ಅಧ್ಯಕ್ಷ ಎಂ.ಡಿ. ಶಫಿಯತ್ ಅಲಿ, ಜಿಲ್ಲಾ ಕಾರ್ಯದರ್ಶಿ ಪ್ರಭು ಹೊಚಕನಳ್ಳಿ, ಪ್ರಭು ತಗಣಿಕರ್ ಬಗದಲ್, ಮುನಿರೊದ್ದೀನ್ ಬಗದಲ್, ಸುನೀಲ ವರ್ಮಾ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.