ಬೀದರ್: ನಗರದ ಮಂಗಲಪೇಟ್ ಸಮೀಪದ ಮೆಥೋಡಿಸ್ಟ್ ಚರ್ಚ್ನ 101ನೇ ವಾರ್ಷಿಕ ಜಾತ್ಸಾ ಉತ್ಸವ ಸಂಭ್ರಮದಿಂದ ನಡೆಯಿತು.
ಶುಕ್ರವಾರ ಜಾತ್ರೆಗೆ ಚಾಲನೆ ದೊರೆತಿದ್ದು, ಭಾನುವಾರ ಕೊನೆಗೊಳ್ಳಲಿದೆ. ಶುಕ್ರವಾರ ಸಂಜೆ ಏಸು ಕ್ರಿಸ್ತನ ಭಾವಚಿತ್ರ, ಶಿಲುಬೆ ಸೇರಿದಂತೆ ಇತರೆ ಸ್ತಬ್ಧಚಿತ್ರಗಳ ಮೆರವಣಿಗೆ ಮಾಡಲಾಯಿತು. ಬೈಕ್ ಮೇಲೆ ಯುವಕ/ಯುವತಿಯರು ರ್ಯಾಲಿ ನಡೆಸಿದರು. ಏಸು ಕ್ರಿಸ್ತನ ಗುಣಗಾನ ಮಾಡುವ ಸಂಗೀತಕ್ಕೆ ಹೆಜ್ಜೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಎರಡನೇ ದಿನವಾದ ಶನಿವಾರ ಕೂಡ ವಿಶೇಷ ಪ್ರಾರ್ಥನೆ, ದೈವ ಸಂದೇಶ ಪ್ರವಚನ, ಭಜನಾ ಸ್ಪರ್ಧೆಗಳು ನಡೆದವು. ಭಾನುವಾರವೂ ಮುಂದುವರೆಯಲಿವೆ. ಭಜನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ. ಕರ್ನಾಟಕದ ಬಿಷಪ್ ಎನ್.ಎಲ್. ಕರ್ಕರೆ ಅವರು ಕೂಡ ಪಾಲ್ಗೊಳ್ಳುವರು. ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ರೆವರೆಂಡ್ ನೆಲ್ಸನ್ ಸುಮಿತ್ರ, ರೆವರೆಂಡ್ ಇಮ್ಯಾನುವೆಲ್ ಪ್ರದೀಪ್, ರೆವರೆಂಡ್ ತುಕಾರಾಂ, ರೆವರೆಂಡ್ ಸೈಮನ್, ರೆವರೆಂಡ್ ಜೈಪಾಲ್ ಅವರು ನಡೆಸಿಕೊಟ್ಟರು.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಸಂಭ್ರಮ ನೆಲೆಸಿದೆ. ವಿದ್ಯುತ್ ದೀಪಗಳಿಂದ ಚರ್ಚ್ ಹಾಗೂ ಇಡೀ ಆವರಣ ಕಂಗೊಳಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.