ಔರಾದ್: ಶಾಸಕ ಪ್ರಭು ಚವಾಣ್ ಅವರು ಗುರುವಾರ ನಡೆಸಿದ ಗ್ರಾಮ ಸಂಚಾರದ ವೇಳೆ ಮಧ್ಯಾಹ್ನ ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕೆಲ ಹತ್ತು ಊಟ ಬಡಿಸಿ ಅವರ ಜತೆ ಕುಳಿತು ಊಟ ಮಾಡಿದರು.
ಶಾಲೆ ಕೊಠಡಿಗಳಿಗೆ ಹಾಗೂ ಊಟದ ಕೋಣೆಗೆ ಹೋಗಿ ಪರಿಶೀಲಿಸಿದರು. ಸ್ವಚ್ಛತೆ ಕಡೆ ಗಮನ ಹರಿಸುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು.
ಗಡಿ ಗ್ರಾಮ ಜಮಗಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಈ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆಯಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಶಿಕ್ಷಕರು ಶಾಲೆ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿ ಅವರಿಗೆ ಪಾಠ ಮಾಡಬೇಕು ಎಂದು ಸಲಹೆ ನೀಡಿದರು.
ಆಂಗ್ಲ ಮಾಧ್ಯಮ ಶಾಲೆಗಳ ಉದ್ಘಾಟನೆ: ಹಂಗರಗಾ, ವನಮಾರಪಳ್ಳಿ, ಬಾದಲಗಾಂವ, ಯನಗುಂದಾ, ನಾಗಮಾರಪಳ್ಳಿ, ಚಿಂತಾಕಿ ವಡಗಾಂವ, ಜಂಬಗಿ, ಗಡಿಕುಶನೂರ, ಕೌಠಾ(ಬಿ) ಗ್ರಾಮಗಳಲ್ಲಿ ಆರಂಭಿಸಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಚಾಲನೆ ನೀಡಿದರು. ಮಮದಾಪುರ, ರಾಯಪಳ್ಳಿ, ಕಂದಗೂಳ, ಕೌಡಗಾಂವ ಸೇರಿದಂತೆ ವಿವಿಧ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು.
ಶಾಲಾ ಕೋಣೆ, ಸುತ್ತುಗೋಡೆ, ನೀರಿನ ಘಟಕ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೂ. 5 ಕೋಟಿ ಕಾಮಗಾರಿಗೆ ಚಾಲನೆ ನೀಡಿದರು.
ಮುಖಂಡ ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ರಾಮರೆಡ್ಡಿ ಪಾಟೀಲ, ರವೀಂದ್ರರೆಡ್ಡಿ, ಪ್ರಕಾಶ ಜೀರ್ಗಾ, ಸಚಿನ್ ಬಿರಾದಾರ, ಶರಣಪ್ಪ ಇಟಗ್ಯಾಳ, ದೀಪಕ ಸಜ್ಜನಶೆಟ್ಟೆ, ಮಾರುತಿರೆಡ್ಡಿ ಪಟ್ನೆ, ಗೋವಿಂದರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.