ಬಸವಕಲ್ಯಾಣ: ‘ಗುಳೆ ಹೋಗುವುದು ಬ್ಯಾಡ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಅದರ ಪ್ರಯೋಜನ ಪಡೆಯಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ರಮೇಶ ಸುಲ್ಫಿ ಹೇಳಿದರು.
ತಾಲ್ಲೂಕಿನ ಹೋಬಳಿ ಕೇಂದ್ರ ರಾಜೇಶ್ವರದ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಮತದಾನ ಕುರಿತಾದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಖಾತ್ರಿ ಯೋಜನೆಯ ದಿನಗೂಲಿ ಹಣ ₹ 316 ರಿಂದ ₹ 349ಕ್ಕೆ ಹೆಚ್ಚಳವಾಗಿದೆ. ಇದಲ್ಲದೆ ಗ್ರಾಮಗಳಲ್ಲಿ ಈ ಯೋಜನೆಯಲ್ಲಿ ಪ್ರತಿಯೊಬ್ಬರಿಗೆ 100 ದಿನಗಳವರೆಗೆ ವಿವಿಧ ಕೆಲಸ ಒದಗಿಸಲಾಗುತ್ತದೆ. ಈ ಸಂಬಂಧ ದೂರುಗಳಿದ್ದರೆ ಸಹಾಯವಾಣಿ 82775 06000 ಸಂಖ್ಯೆಗೆ ಕರೆ ಮಾಡಬಹುದು’ ಎಂದರು.
‘ಲೋಕಸಭೆ ಚುನಾವಣೆಯಲ್ಲಿ ಆಸೆ ಆಮೀಷಗಳಿಗೆ ಬಲಿಯಾಗದೆ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಮ್ಮದು ಪ್ರಜಾಪ್ರಭುತ್ವ ದೇಶವಾಗಿದ್ದು, ಉತ್ತಮ ಆಡಳಿತ ನೀಡುವವರನ್ನು ಆಯ್ಕೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ’ ಎಂದರು.
ನರೇಗಾ ಸಹಾಯಕ ನಿರ್ದೇಶಕ ಸಂತೋಷಕುಮಾರ ಚವಾಣ ಮಾತನಾಡಿ, ‘ಗ್ರಾಮ ಪಂಚಾಯಿತಿಯವರು ಬೇಸಿಗೆ ಮುಗಿಯುವವರೆಗೂ ಕೂಲಿಕಾರ್ಮಿಕರಿಗೆ ನಿರಂತರವಾಗಿ ಕೆಲಸ ಕೊಡಬೇಕು. ಈ ಬಗ್ಗೆ ಯಾವುದೇ ದೂರು ಬರದಂತೆ ನೋಡಿಕೊಳ್ಳಬೇಕು’ ಎಂದರು.
ಪಿಡಿಒ ಪದ್ಮಪ್ಪ ಗಾಣಿಗೇರ, ಪ್ರಮುಖರಾದ ರಾಕೇಶ ಐನೊಳ್ಳಿ, ವೀರಾರೆಡ್ಡಿ, ಅಮರನಾಥ ಪಾಟೀಲ, ಮಾಣಿಕ ಮೋರೆ, ಶ್ರೀಕಾಂತ ಪಾಟೀಲ, ಜಲೀಲಸಾಬ್, ಅವಿನಾಶ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.