ಬೀದರ್: ‘ಬರುವ ಮಾ. 21ರಿಂದ 27ರ ವರೆಗೆ ನಗರದ ಡಾ. ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗಮಂದಿರದಲ್ಲಿ ನಾಟಕೋತ್ಸವ ಹಾಗೂ ತತ್ವಪದಕಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 21ರಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಜಿ. ಕಪ್ಪಣ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಜಾನಪದ ಕಲಾವಿದರ ಬಳಗ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಿತ್ಯ ಸಂಜೆ 6ಕ್ಕೆ ಸಾಮಾಜಿಕ ಸಂದೇಶ ಸಾರುವ ನಾಟಕಗಳು, ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರು ಸ್ಥಳೀಯ ಕಲೆ ಪ್ರದರ್ಶಿಸುವರು ಎಂದು ಮಾಹಿತಿ ನೀಡಿದರು.
21ರಂದು ಗೋವಾ ಅಕಾಡೆಮಿ ಮಾಜಿ ನಿರ್ದೇಶಕಿ ಪದ್ಮಶ್ರೀ ಜೋಸಲ್ಕರ್ ಉದ್ಘಾಟನೆ ನೆರವೇರಿಸುವರು. ಸಿಂಧನೂರಿನ ಕಲಾವಿದ ನಾರಾಯಣಪ್ಪ ಮಾಡಶಿರವಾರ ತತ್ವಪದ ಗಾಯನ ಕಾರ್ಯಕ್ರಮ ನಡೆಸಿಕೊಡುವರು. ಸಾಹಿತಿ ಜಯಂತ್ ಕಾಯ್ಕಿಣಿ ರಚನೆಯ 'ಜತೆಗಿರುವನು ಚಂದಿರ' ಎನ್ನುವ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಪ್ರತಿದಿನ ಜರುಗುವ ನಾಟಕೋತ್ಸವದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಗಣ್ಯರು, ಉದ್ಯಮಿಗಳು, ಸಮಾಜ ಸೇವಕರು, ಕಲಾವಿದರು, ಸಾಹಿತಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರವೇಶ ಉಚಿತವಾಗಿರುತ್ತದೆ. ಇದೇ ವೇಳೆ ಏಳು ಜನ ಹಿರಿಯ ಕಲಾವಿದರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು. ಕಲಾವಿದ ಸುನೀಲ್ ಕಡ್ಡೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.