ಯಾಕತಪುರ (ಜನವಾಡ): ‘ಜಾಗತಿಕ ತಾಪಮಾನ ಹೆಚ್ಚಳ ಪ್ರಕೃತಿ ವಿಕೋಪಗಳಿಗೆ ಕಾರಣವಾಗಲಿದೆ’
ಎಂದು ಪರಿಸರ ವಾಹಿನಿ ಸಂಘಟನೆಯ ಅಧ್ಯಕ್ಷ ಶೈಲೇಂದ್ರ ಕಾವಡಿ ಹೇಳಿದರು.
ಮನ್ನಳ್ಳಿಯ ಸರ್ಕಾರಿ ಪದವಿ ಕಾಲೇಜು ವತಿಯಿಂದ ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಹಾಗೂ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಪಮಾನ ಏರಿಕೆಯಿಂದ ಆಗುವ ಅನಾಹುತಗಳ ಬಗ್ಗೆ ಈಗಾಗಲೇ ಪರಿಸರ ತಜ್ಞರು ಸುಳಿವು ನೀಡಿದ್ದಾರೆ. ತಾಪಮಾನ ತಗ್ಗದಿದ್ದರೆ ಭೂಮಿ ಮೇಲೆ ಮಾನವನ ಬದುಕು ಕಷ್ಟಕರವಾಗಲಿದೆ ಎಂದು ತಿಳಿಸಿದರು.
ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು. ಪ್ರಕೃತಿ ವಿಕೋಪಗಳನ್ನು ಮುಂಚೆಯೇ ಗ್ರಹಿಸುವ ವನ್ಯಜೀವಿಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ, ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಹಾಲಪ್ಪಗೋಳ್ ಪೃಥ್ವಿರಾಜ್ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಜೈವಿಕ ಇಂಧನ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾಲೇಜು ಪ್ರಾಚಾರ್ಯ ಧನರಾಜ ಬಿರಾದಾರ, ಮನ್ನಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸಮದ್ ಷಾ, ಸದಸ್ಯ ಶಂಕರ ಬಾಬು, ದಶವಂತ, ಸವಿತಾ ಪಾಟೀಲ ಹಾಗೂ ಸಂದೀಪ್ ತಿವಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.