ಔರಾದ್: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದೇಶದಾದ್ಯಂತ ಹಮ್ಮಿಕೊಂಡಿರುವ ಆಕ್ಷಿಜನ್ ಚಾಲೆಂಜ್ ಅಭಿಯಾನ ಅಂಗವಾಗಿ ಸ್ಥಳೀಯ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಸಸಿ ನೆಡಲು ಶುರು ಮಾಡಿದರು.
ತಾಲ್ಲೂಕಿನ ಚಿಂತಾಕಿ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾಕಲೆ ಸಸಿಗೆ ನೀರುಣಿಸಿ ‘ವಿದ್ಯಾರ್ಥಿ ಪರಿಷತ್ನಿಂದ ಇಡೀ ರಾಜ್ಯದಲ್ಲಿ 10 ಲಕ್ಷ ಸಸಿ ನೆಡುವ ಅಭಿಯಾನ ಈಗಾಗಲೇ ಶುರುವಾಗಿದೆ. ಎಲ್ಲ ವಸತಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಸಸಿ ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಈ ಮಹತ್ವದ ಕಾರ್ಯಕ್ಕೆ ಎಲ್ಲ ವಿದ್ಯಾರ್ಥಿಗಳು ಕೈಜೋಡಿಸಬೇಕು’ ಎಂದು ಹೇಳಿದರು.
ಉಪನ್ಯಾಸಕ ಅಮಿತರೆಡ್ಡಿ ಮಾತನಾಡಿ ‘ಮನುಷ್ಯ ಸೇರಿದಂತೆ ಜೀವಿಗಳು ಬದುಕಲು ಪರಿಸರ ಸಂರಕ್ಷಣೆ ತೀರಾ ಅಗತ್ಯವಾಗಿದೆ. ಇಂದು ಪರಿಸರದಲ್ಲಿ ಸಾಕಷ್ಟು ವ್ಯತಿರಿಕ್ತ ಬದಲಾವಣೆ ಕಂಡು ಬರುತ್ತಿದೆ. ಹೀಗೆ ಆದರೆ ಮನುಷ್ಯನ ಬದುಕು ಕಷ್ಟವಾಗಲಿದೆ. ಅದಕ್ಕಾಗಿ ನಾವು ಪರಿಸರ ಉಳಿಸಿ ಬೆಳೆಸಲು ಹೆಚ್ಚಿನ ಕಾಳಜಿ ತೋರಬೇಕಿದೆ’ ಎಂದು ತಿಳಿಸಿದರು.
ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ಮಾತನಾಡಿ ‘ನಮ್ಮ ಪರಿಷತ್ನಿಂದ ಜಿಲ್ಲೆಯಲ್ಲಿ 1 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದ್ದು, ಈ ಅಭಿಯಾನ ಎಲ್ಲ ಕಡೆ ಚುರುಕಿನಿಂದ ನಡೆಯುತ್ತಿದೆ ಎಂದರು.
ಶಿಕ್ಷಕ ಕಿಶೋರ ಮಡಿವಾಳ, ಕಪಿಲ್ ಪಾಟೀಲ, ರೇಣುಕಾ, ನಾಗರತ್ನ, ಕಪಿಲ್ ಡೊಂಗರೆ, ಸಿಕಂದರ, ಜೈಪಾಲರೆಡ್ಡಿ, ಮಲ್ಲಿಕಾರ್ಜುನ ಟೇಕರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.