ಬೀದರ್: ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಭಾನುವಾರ ಮತ್ತೆ ಆರ್ಭಟಿಸಿದ್ದಾನೆ.
ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ಇತ್ತು. ಮಧ್ಯಾಹ್ನದ ನಂತರ ಕಾರ್ಮೋಡ ಆವರಿಸಿಕೊಂಡು ಸಂಜೆ ಬಿರುಸಿನ ವರ್ಷಧಾರೆಯಾಯಿತು.
ಜಿಲ್ಲೆಯ ಬೀದರ್, ಹುಮನಾಬಾದ್ ತಾಲ್ಲೂಕಿನ ಬಹುತೇಕ ಕಡೆ ಉತ್ತಮ ವರ್ಷಧಾರೆಯಾಗಿದೆ. ಚಿಟಗುಪ್ಪ, ಬಸವಕಲ್ಯಾಣ, ಭಾಲ್ಕಿಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ವರ್ಷಧಾರೆಗೆ ಬೀದರ್ ನಗರದ ಬೊಮ್ಮಗೊಂಡೇಶ್ವರ ವೃತ್ತ ಸಮೀಪದ ರೈಲ್ವೆ ಅಂಡರಪಾಸ್, ಕೆಇಬಿ ರಸ್ತೆ, ವಿದ್ಯಾನಗರದ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು, ಸಂಚಾರ ಅಸ್ತವ್ಯಸ್ತಗೊಂಡಿತು. ಕೆಇಬಿಯಲ್ಲಿ ಮರವೊಂದು ಧರೆಗುರುಳಿ ಕಾರಿನ ಮೇಲೆ ಬಿದ್ದಿದ್ದರಿಂದ ಹಾನಿಯಾಗಿದೆ. ಬೀದರ್ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಮಳೆ ಬಿದ್ದಿದೆ.
ಜೂನ್ ಮೊದಲ ವಾರ ಜಿಲ್ಲೆಯಾದ್ಯಂತ ಉತ್ತಮ ರೀತಿಯಲ್ಲಿ ಮಳೆಯಾಗಿತ್ತು. ಅನಂತರ ಬಿತ್ತನೆ ಕಾರ್ಯ ನಡೆದಿತ್ತು. ಎರಡನೇ ಹಾಗೂ ಮೂರನೇ ವಾರ ಹೇಳಿಕೊಳ್ಳುವಂತಹ ಮಳೆಯಾಗಿರಲಿಲ್ಲ. ಇದರಿಂದಾಗಿ ರೈತರು ಚಿಂತಕ್ರಾಂತರಾಗಿದ್ದರು. ಭಾನುವಾರ ಸುರಿದ ಮಳೆಗೆ ರೈತರು ಸಂತಸಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.