ಬೀದರ್: ಜಿಲ್ಲಾ ಮಠಾಧೀಶರ ಒಕ್ಕೂಟ ಹಾಗೂ ರಾಮಲೀಲಾ ಉತ್ಸವ ಸಮಿತಿ ಸಹಯೋಗದಲ್ಲಿ ನಗರದ ಸಾಯಿ ಆದರ್ಶ ಶಾಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ರಾಮೋತ್ಸವ’ ಕಾರ್ಯಕ್ರಮಕ್ಕೆ ಸೋಮವಾರ ರಾತ್ರಿ ತೆರೆ ಬಿತ್ತು.
ಐದು ಸಲ ಶಂಖನಾದ ಹಾಗೂ ವೇದ ಮಂತ್ರಘೋಷಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ರಾಮಲೀಲಾ ಉತ್ಸವ ಸಮಿತಿ ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಚಂದ್ರಶೇಖರ ಗಾದಾ, ಮಹೇಶ್ವರ ಸ್ವಾಮಿ ಅವರು ರಾಮ, ಲಕ್ಷ್ಮಣ ಹಾಗೂ ಸೀತೆಯ ಮೂರ್ತಿಗಳನ್ನು ಹೊತ್ತು ವೇದಿಕೆಗೆ ತಂದರು. ಅನಂತರ ಸ್ವಾಮೀಜಿಗಳು, ಗಣ್ಯರು ಹಾಲಿನ ಅಭಿಷೇಕ ನೆರವೇರಿಸಿದರು. ಪುಷ್ಪವೃಷ್ಟಿ ಮಾಡಿ ಗೌರವ ಸಮರ್ಪಿಸಿದರು.
ಇದಾದ ಬಳಿಕ ರಾಮ, ಲಕ್ಷ್ಮಣ ಹಾಗೂ ಸೀತೆಯ ವೇಷಧಾರಿ ಮಕ್ಕಳಿಗೆ ಗಣ್ಯರು ಪುಷ್ಪವೃಷ್ಟಿ ಮಾಡಿ ಗೌರವಿಸಿದರು. ರಾಮಲೀಲಾ ಉತ್ಸವ ಸಮಿತಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕಾಗಿ ಅನೇಕರು ಹೋರಾಟ ನಡೆಸಿದ್ದಾರೆ. ಅದರ ಫಲ ಈಗ ಸಿಕ್ಕಿದೆ. ಇದೊಂದು ಐತಿಹಾಸಿಕ, ಸ್ಮರಣೀಯ ದಿನವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಭಾರತ ರಾಮರಾಜ್ಯವಾಗುವತ್ತ ಮುನ್ನಡೆದಿದೆ. ಪ್ರಗತಿಯ ಪಥದಲ್ಲಿ ದಾಪುಗಲು ಕೂಡ ಇಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಉತ್ತಮ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಅವರಿಂದ ಇಡೀ ವಿಶ್ವ ಅಯೋಧ್ಯೆ ಕಡೆಗೆ ತಿರುಗಿ ನೋಡುವಂತಾಗಿದೆ ಎಂದು ಹೇಳಿದರು.
ಮಠಾಧೀಶರ ಒಕ್ಕೂಟದ ಶಂಭುಲಿಂಗ ಶಿವಾಚಾರ್ಯ, ಜಯಶಾಂತಲಿಂಗ ಶಿವಾಚಾರ್ಯ, ಸಿದ್ದೇಶ್ವರ ಸ್ವಾಮೀಜಿ, ಹಾವಗಿ ಶಿವಾಚಾರ್ಯ, ನೀರಗುಡಿಯ ಹವಾ ಮಲ್ಲಿನಾಥ ಸ್ವಾಮೀಜಿ, ಮುಖಂಡರಾದ ಮುಖಂಡರಾದ ಚನ್ನಬಸವ ಬಳತೆ, ನಂದಕುಮಾರ ಸಾಳುಂಕೆ, ನಾಗರಾಜ ಕರ್ಪೂರ, ಗುರುನಾಥ ಕೊಳ್ಳೂರ, ಬಾಬುವಾಲಿ, ರಾಮಕೃಷ್ಣನ್ ಸಾಳೆ, ಗಿರಿರಾಜ ಇತರರು ಹಾಜರಿದ್ದರು. ಭಕ್ತಿ ಗೀತ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.