ಬೀದರ್: ಸೇವಾ ಪ್ರತಿನಿಧಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ವಿವಿಧ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಯೋಜನೆಯ ಕಲಬುರಗಿ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಹೇಳಿದರು.
ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಟ್ರಸ್ಟ್ನ ಬೀದರ್ ತಾಲ್ಲೂಕು ಸೇವಾ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಟ್ರಸ್ಟ್ನಿಂದ ಆರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ, ಸುಜ್ಞಾನ ನಿಧಿ ಶಿಷ್ಯವೇತನ, ಶುದ್ಧ ಗಂಗಾ ಘಟಕ, ನಿರ್ಗತಿಕರಿಗೆ ಮಾಸಾಶನ, ವಾತ್ಸಲ್ಯ ಮನೆ, ಜನ ಮಂಗಳ ಕಾರ್ಯಕ್ರಮ, ಜ್ಞಾನದೀಪ ಶಿಕ್ಷಕರ ನಿಯೋಜನೆ, ಕೆರೆ ಹೂಳೆತ್ತುವುದು ಮೊದಲಾದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಸೇವಾ ಪ್ರತಿನಿಧಿಗಳು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ, ಅವುಗಳ ಸದಸ್ಯರಿಗೆ ಬ್ಯಾಂಕ್ಗಳ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಗ್ರಾಮಾಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ಯೋಜನೆಯ ಕೇಂದ್ರ ಕಚೇರಿಯ ಸಿ.ಆರ್.ಇ. ತರಬೇತಿ ಕೇಂದ್ರದ ಪ್ರಾಚಾರ್ಯ ಸೋಮನಾಥ ಕೆ., ಸೇವಾ ಪ್ರತಿನಿಧಿ ಯೋಜನಾಧಿಕಾರಿ ಶಿವಪ್ರಸಾದ್, ಬೀದರ್ ಗ್ರಾಮಾಂತರ ಯೋಜನಾಧಿಕಾರಿ ಸಂಜಯ್ ನಾಯ್ಕ, ಬೀದರ್ ತಾಲ್ಲೂಕು ಯೋಜನಾಧಿಕಾರಿ ಧಮೇಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.