ಬೀದರ್: ರೇಣುಕಾಚಾರ್ಯ ಜಯಂತಿಯನ್ನು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸರಳ ರೀತಿಯಲ್ಲಿ ಆಚರಿಸಲಾಯಿತು.
ನೌಬಾದಿನ ರಾಜಶೇಖರ ಶಿವಾಚಾರ್ಯರು, ಪಂಚಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ‘ರೇಣುಕಾಚಾರ್ಯರು ಸಮಾಜದಲ್ಲಿ ಬೇರೂರಿದ್ದ ಮೇಲು-ಕೀಳು ಭಾವ ಹೋಗಲಾಡಿಸಿದರು. ತೆಲಂಗಾಣದ ಕೊಲನಪಾಕದ ಸೋಮೇಶ್ವರ ಲಿಂಗದಲ್ಲಿ ಉದ್ಭವಿಸಿದ ರೇಣುಕಾಚಾರ್ಯರು ಸರ್ವ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಿದ್ದರು’ ಎಂದು ತಿಳಿಸಿದರು.
‘18 ಮಠಗಳನ್ನು ಸ್ಥಾಪಿಸಿ ಸರ್ವ ಸಮುದಾಯಗಳ ಜನರಿಗೆ ಲಿಂಗ ದೀಕ್ಷೆ, ಭಕ್ತಿ ಹಾಗೂ ಮುಕ್ತಿಯ ಮಾರ್ಗ ತೋರಿದ್ದರು. ಮನುಕುಲಕ್ಕೆ ಅವರ ಕೊಡುಗೆ ಅನನ್ಯವಾಗಿದೆ. ಶಿವಾಗಮ ಹಾಗೂ ಸಿದ್ಧಾಂತ ಶಿಖಾಮಣಿ ಗ್ರಂಥಗಳು ರೇಣುಕಾಚಾರ್ಯರ ಕಾರ್ಯಗಳಿಗೆ ಹಿಡಿದ ಕೈಗನ್ನಡಿಯಾಗಿವೆ’ ಎಂದು ತಿಳಿಸಿದರು.
ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರದ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ದೇಶದಾದ್ಯಂತ ರೇಣುಕಾಚಾರ್ಯ ಜಯಂತಿ ಆಚರಿಸಬೇಕು. ಬನಾರಸ್ ಹಿಂದು ವಿಶ್ವವಿದ್ಯಾಲಯ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪಂಚಾಚಾರ್ಯರ ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಕಿರಣಕುಮಾರ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕಚೇರಿಯ ಮಹೇಶ, ವಿಶ್ವ ಹಿಂದು ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ, ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ, ಮುಖಂಡರಾದ ರವಿ ಸ್ವಾಮಿ, ಓಂಪ್ರಕಾಶ ರೊಟ್ಟೆ, ಜಗದೀಶ್ವರ ಬಿರಾದಾರ, ವರದಯ್ಯ ಸ್ವಾಮಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಬಸವರಾಜ ಸ್ವಾಮಿ ಹೆಡಗಾಪುರ, ಅಂಬರೀಷ್ ಸ್ವಾಮಿ, ಕಾವೇರಿ ಸ್ವಾಮಿ, ದಿಲೀಪ್ ಕಮಠಾಣೆ, ಕಂಟೆಪ್ಪ ಭಂಗೂರೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.