ಬಸವಕಲ್ಯಾಣ: ಗೊಂಡಕ್ಕೆ ಪರ್ಯಾಯ ಪದ ಕುರುಬ ಪರಿಗಣಿಸಲು ಆಗ್ರಹಿಸಿ ತಿಂಥಿಣಿಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ ಹಮ್ಮಿಕೊಂಡಿರುವ ತಾಲ್ಲೂಕು ಮಟ್ಟದ ಸರಣಿ ಹೋರಾಟದ ಅಂಗವಾಗಿ ಶುಕ್ರವಾರ ಇಲ್ಲಿ ಗೊಂಡ ಕುರುಬ ಸಮಾಜದವರಿಂದ ಪ್ರಧಾನಮಂತ್ರಿಗೆ ಬರೆದ ಪತ್ರವನ್ನು ತಹಶೀಲ್ದಾರ್ ಪಲ್ಲವಿ ಬೆಳಕಿರೆ ಅವರಿಗೆ ಸಲ್ಲಿಸಲಾಯಿತು.
ಬೀರಗೊಂಡ, ಬೊಮ್ಮಗೊಂಡೇಶ್ವರ ದೇವರ ಇತಿಹಾಸದ ಹಿನ್ನೆಲೆಯ ಕುರುಬರನ್ನು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಕಾರಣ ಗೊಂಡರೆಂದು ಕರೆಯಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗೊಂಡ ಸಮುದಾಯದವರು ಇದ್ದಾರೆ. ಆದರೆ, ಮೈಸೂರು ಭಾಗದ ತಮ್ಮದೇ ಕುರುಬ ಜನಾಂಗದ ಪ್ರಭಾವಕ್ಕೆ ಒಳಗಾಗಿ ಕುರುಬ ಎಂದು ಇವರೆಲ್ಲ ದಾಖಲೆಗಳಲ್ಲಿ ನಮೂದಿಸಿದ್ದಾರೆ. ಆದ್ದರಿಂದ ಈ ಭಾಗದ ಎಲ್ಲರಿಗೂ ಗೊಂಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದಾಗಿ ಇದುವರೆಗಿನ ಸರ್ಕಾರಗಳು ಭರವಸೆ ನೀಡಿದ್ದರೂ ಪ್ರಯೋಜನ ಆಗಿಲ್ಲ. ಇನ್ನು ಮುಂದಾದರೂ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ಭಾಗದ ಎಲ್ಲ ಜಿಲ್ಲೆಗಳ ಆಯ್ದ ತಾಲ್ಲೂಕು ಕೇಂದ್ರಗಳಲ್ಲಿ ಜನವರಿ 3ರವರೆಗೆ ಪ್ರತಿದಿನ ಕೇಂದ್ರ ಸರ್ಕಾರಕ್ಕೆ ಬರೆದ ಮನವಿಪತ್ರಗಳನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಗುತ್ತದೆ. ಇಷ್ಟಾದರೂ ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಸಹ ಎಚ್ಚರಿಸಲಾಯಿತು.
ಗೊಂಡ ಕುರುಬ ಸಮಾಜ ಸಂಘದ ಪ್ರಮುಖರಾದ ಚಂದ್ರಕಾಂತ ಮೇತ್ರೆ, ಸುಭಾಷ ರೇಕುಳಗಿ, ರಾಮ ತೊಗರಖೇಡೆ, ಸತೀಶ ಸಸ್ತಾಪುರ, ರಾಜೇಶ ಮೇತ್ರೆ, ನಾಗನಾಥ ಮೇತ್ರೆ, ರಾಮಲಿಂಗ ಕುದಾಂಡೆ, ಝರೆಪ್ಪ ಮೇತ್ರೆ, ಬೀರಪ್ಪ ಪೂಜಾರಿ, ಸುರೇಶ ಬಿರಾದಾರ, ಮಹಾಳಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.