ಬೀದರ್: ನಿವೇಶನಗಳ ಹಂಚಿಕೆಯಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.
2020ರ ನವೆಂಬರ್ 27ರಿಂದ 2023ರ ಮೇ 23ರ ಅವಧಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ‘ಬುಡಾ’ ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಿದ್ದರು.
ಅವರ ದೂರು ಆಧರಿಸಿ ಇಲಾಖೆಯು ಕಲಬುರಗಿ ವಿಭಾಗೀಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕ ಎ.ಎಸ್.ಕಾಂಬಳೆ, ಜಂಟಿ ನಿರ್ದೇಶಕಿ ಶಾಂತಲಾ ಎಂ.ಎಸ್. ಹಾಗೂ ಧಾರವಾಡ ವಲಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ವಿವೇಕ ಎನ್.ಕಾರೇಕರ್ ಅವರನ್ನು ಒಳಗೊಂಡ ಜಂಟಿ ಪರಿವೀಕ್ಷಣಾ ತಂಡ ರಚಿಸಿದ್ದರು. ಜಂಟಿ ಪರಿವೀಕ್ಷಣಾ ತಂಡದ ಮೂವರು ಅಧಿಕಾರಿಗಳ ತಂಡವು 2023ರ ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 15ರವರೆಗೆ ಬುಡಾದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ, ಲೇಔಟ್ಗಳಿಗೆ ಭೇಟಿ ನೀಡಿ ನಿವೇಶನಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದೆ. ನಿಯಮಗಳನ್ನು ಪಾಲಿಸದೆ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದು, ಅದರ ಪ್ರಕಾರ ಅಂದಿನ ಬುಡಾ ಆಯುಕ್ತ (ಹಾಲಿ ಶಹಬಾದ್ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್) ಅಭಯ ಕುಮಾರ್ ಅವರನ್ನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿರುಮಲಾಚಾರ್ ಜೆ. ಅವರು ಸೇವೆಯಿಂದ ಅಮಾನತುಗೊಳಿಸಿ ಫೆ. 14ರಂದು ಆದೇಶ ಹೊರಡಿಸಿದ್ದಾರೆ.
ಆಯುಕ್ತ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್ಗೆ ಆಗ್ರಹ
‘ನಿಯಮ ಉಲ್ಲಂಘಿಸಿದ ಅಂದಿನ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಆಯುಕ್ತ ಅಭಯ ಕುಮಾರ್ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಆಯುಕ್ತರು ಹಾಗೂ ಅಂದಿನ ಬಿಡಿಎ ಅಧ್ಯಕ್ಷ ಬಾಬುವಾಲಿ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಇಬ್ಬರಿಂದಲೇ ಭರಿಸಬೇಕು’ ಎಂದು ದೂರುದಾರ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.
ಬೀದರ್ ನಗರದ ಸಿದ್ರಾಮಯ್ಯ ಬಡಾವಣೆಯಲ್ಲಿನ ಒಟ್ಟು 33ಎ–12 ಗುಂಟೆ ವಿಸ್ತೀರ್ಣದ ಜಮೀನಿನ ಪರಿಷ್ಕೃತ ವಿನ್ಯಾಸಕ್ಕೆ ಸರ್ಕಾರದಿಂದ ಅನುಮೋದನೆ ಪಡೆದಿಲ್ಲ. ನೌಬಾದ್ ಸರ್ವೆ ನಂಬರ್ 8ರ ಅನುಮೋದಿತ ವಿನ್ಯಾಸದ ನಕ್ಷೆ ಇಲ್ಲ.
ಚಿದ್ರಿ ಗ್ರಾಮದ ಸರ್ವೆ ನಂಬರ್ 125ರ ಅಭಿವೃದ್ಧಿಯಾಗಿರುವ ವಸತಿ ಯೋಜನೆ ಪ್ರದೇಶವನ್ನು ಇಟಿಎಸ್ಸರ್ವೆ ಕೈಗೊಂಡು ಸದರಿ ಸರ್ವೆಯಲ್ಲಿ ಉದ್ಯಾನವನ/ ಬಯಲು ಜಾಗೆ ಹಾಗೂ ನಾಗರಿಕ ಸೌಲಭ್ಯ ಪ್ರದೇಶಗಳ ವಿಸ್ತೀರ್ಣವು ನಿಯಮಾನುಸಾರ ಇಲ್ಲ. ಜಾಗ ಕೂಡ ಕಡಿಮೆಯಾಗಿದೆ. ಈ ಬಗ್ಗೆ ಪರಿಶೀಲಿಸದೆ ಸರ್ಕಾರದಿಂದ ಅನುಮೋದನೆ ಪಡೆಯದೆ ವಸತಿ ಉದ್ದೇಶಕ್ಕೆ ಕಾಯ್ದಿರಿಸಿದ ವಿಸ್ತೀರ್ಣದಲ್ಲಿ ಹೆಚ್ಚುವರಿಯಾಗಿ ದೊರೆತ ಪ್ರದೇಶದಲ್ಲಿ ಮಧ್ಯಂತರ ನಿವೇಶನಗಳನ್ನು ಗುರುತಿಸುವುದು ನಿಯಮಬಾಹಿರ.
ಚಿದ್ರಿ ಗ್ರಾಮದ ಸರ್ವೆ ನಂಬರ್ 125ರ ಪರಿಷ್ಕೃತ ವಿನ್ಯಾಸ ಅನೆಕ್ಷರ್–4 ನಕ್ಷೆಯೊಂದಿಗೆ ಸ್ಥಳ ಪರಿಶೀಲಿಸಲಾಗಿ ನಕ್ಷೆಯಲ್ಲಿನ ರಸ್ತೆಗಳು ಹಾಗೂ ನಿವೇಶನಗಳ ಅಳತೆಗಳಿಗೂ ವ್ಯತ್ಯಾಸ ಇರುವುದು ಕಂಡು ಬಂದಿದೆ.
ಪ್ರಾಧಿಕಾರದಿಂದ ಇ–ಪ್ರೊಕ್ಯೂರ್ಮೆಂಟ್ ಮೂಲಕ ಹರಾಜು ಮಾಡಲು ಬೀದರ್ ನಗರದ ‘ಬೀದರ್ ಕ್ರಾಂತಿ’ ಹಾಗೂ ‘ಬೀದರ್ ಸಂದೇಶ’ ದಿನಪತ್ರಿಕೆಗಳಲ್ಲಿ 2022ರ ಮಾರ್ಚ್ 2627ರ ಪ್ರಕಟಣೆಯಲ್ಲಿ ಕ್ರಮ ಸಂಖ್ಯೆ: 3 4ರಲ್ಲಿ ದಿನಾಂಕಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಮಾರ್ಚ್ 26ರ ‘ಬೀದರ್ ಕ್ರಾಂತಿ’ ದಿನಪತ್ರಿಕೆಯ ಪುಟ ಸಂಖ್ಯೆ 4ರಲ್ಲಿ ಪ್ರಾಧಿಕಾರದ ಹರಾಜು ಪ್ರಕಟಣೆ ಇರುವುದಿಲ್ಲ. ಆದರೆ ಕಚೇರಿ ಕಡತದಲ್ಲಿರುವ ಇದೇ ದಿನಾಂಕದ ಇದೇ ಪತ್ರಿಕೆಯ ಪುಟ ಸಂಖ್ಯೆ: 4ರಲ್ಲಿ ಪ್ರಕಟಣೆ ಹೊರಡಿಸಿರುವ ಬಗ್ಗೆ ಮುದ್ರಿತ ಪ್ರತಿ ಇರುತ್ತದೆ.
ಬಿಡಿ ನಿವೇಶನಗಳನ್ನು ಹರಾಜು ಮಾಡುವಾಗ ಸರ್ಕಾರದ ಸುತ್ತೋಲೆ (ಶೇ 75–ಶೇ 25) ವರ್ಗವಾರು ಮೀಸಲಾತಿ ಪರಿಗಣಿಸಿಲ್ಲ.
ಮೂಲೆ (ಕಾರ್ನರ್) ನಿವೇಶನ ದರಗಳನ್ನು ನಿಗದಿಪಡಿಸುವಾಗ ಆಯಾ ಪ್ರದೇಶದ ನಿವೇಶನಗಳ ದರಗಳ ಶೇ 10ರಷ್ಟು ಹೆಚ್ಚಿಗೆ ದರ ನಿಗದಿಪಡಿಸಿಲ್ಲ.
ನೋಂದಣಿ ಶುಲ್ಕ ಪಾವತಿಸಿರುವ ಬ್ಯಾಂಕ್ ಚಲನ್ಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಆದರೆ ಸಹಿ ಒಂದೇ ತರಹ ಇದೆ. ಖರೀದಿ ಪತ್ರದಲ್ಲಿ ಬೇರೆ ಸಹಿಗಳು ಇವೆ. ಸದರಿ ಚಲನ್ಗಳನ್ನು ಒಂದೇ ದಿನ ಪಾವತಿಸಲಾಗಿದೆ. ಈ ಪೈಕಿ ಎರಡು ಚಲನ್ಗಳನ್ನು ತಿದ್ದುಪಡಿ ಮಾಡಿ ಬೇರೆ ಹೆಸರು ಬರೆದಿರುವುದನ್ನು ಗಮನಿಸಿ ಬ್ಯಾಂಕಿನಿಂದ ಚಲನ್ಗಳನ್ನು ತರಿಸಿ ಪರಿಶೀಲಿಸಿದಾಗ ತಿದ್ದುಪಡಿ ಇಲ್ಲದೇ ಬೇರೆಯವರ ಹೆಸರಿಗೆ ಇರುವುದು ಗಮನಕ್ಕೆ ಬಂದಿದೆ.
ಒಟ್ಟು 11 ನಿವೇಶನಗಳಿಗೆ ‘ಸಿಂಗಲ್ ಬಿಡ್’ ಆಗಿದ್ದು ಹರಾಜಿನಲ್ಲಿ ಸ್ಪರ್ಧೆ ಆಗಿರುವುದಿಲ್ಲ. ಆಯುಕ್ತರು ಈ ಬಗ್ಗೆ ಅಧ್ಯಕ್ಷರಿಗೆ ಟಿಪ್ಪಣಿ ಮಂಡಿಸಿರುವುದು ಇದೆ. ಆದರೆ ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸದೆ ತೀರ್ಮಾನ ಕೈಗೊಳ್ಳಲಾಗಿದೆ.
ನೌಬಾದ್ಸರ್ವೆ ನಂಬರ್ 4ರಲ್ಲಿನ ನಿವೇಶನಗಳನ್ನು ಈಗಾಗಲೇ ಹಂಚಿಕೆ ಆಗಿರುವುದರಿಂದ ನಿಯಮಾನುಸಾರ ಹಂಚಿಕೆಯಾದವರ ಹಂಚಿಕೆಯನ್ನು ರದ್ದುಪಡಿಸದೆ ಪುನಃ ಹರಾಜಿಗೆ ಪರಿಗಣಿಸಲಾಗಿದೆ.
ಸಾಕಷ್ಟು ನ್ಯೂನತೆಗಳು ತನಿಖಾ ಸಂದರ್ಭದಲ್ಲಿ ಕಂಡು ಬಂದಿದೆ. ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಷ್ಟ ಉಂಟಾಗಿದೆ.
ಎಂಜಿನಿಯರ್ ಅಮಾನತು
ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ನಿಯಮಾನುಸಾರ ಕೆಲಸ ಮಾಡದೆ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬುಡಾದ ಹಿಂದಿನ ಆಯುಕ್ತ, ಶಹಾಬಾದ್ ನಗರಸಭೆಯ ಹಾಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಭಯ್ ಕುಮಾರ್ ಅವರನ್ನು ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ದಾಂಡೇಲಿ ನಗರಸಭೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಪರಿಸರ) ಹುದ್ದೆಗೆ ಸ್ಥಳಾಂತರಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿರುಮಲಾಚಾರ್ ಜೆ. ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.