ಬೀದರ್: ಬಸವಕಲ್ಯಾಣ ಅನುಭವ ಮಂಟಪ ಸಂಚಾಲಿತ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಪ್ರವೇಶ ಪರೀಕ್ಷೆ ಮಾ. 23ರಂದು ನಡೆಯಲಿದ್ದು, ಅದರ ಕರಪತ್ರಗಳನ್ನು ಬಸವಲಿಂಗ ಪಟ್ಟದ್ದೇವರು ಬಿಡುಗಡೆಗೊಳಿಸಿದರು.
ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು,‘ಹೆಣ್ಣುಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕಾಗಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಪ್ರಾರಂಭಿಸಲಾಗಿದೆ. ಈ ವಿದ್ಯಾಲಯದಲ್ಲಿ ಕನ್ನಡ ಮಾಧ್ಯಮದ ರಾಜ್ಯ ಸರ್ಕಾರದ ಶಾಲಾ ಪಠ್ಯದ ಜೊತೆಗೆ ಬಸವಾದಿ ಶರಣರ ಸಂಸ್ಕೃತಿಯನ್ನು ವಿಶೇಷವಾಗಿ ಅಧ್ಯಯನ ಮಾಡಿಸಲಾಗುತ್ತದೆ. ಇದು ನಮ್ಮ ರಾಜ್ಯದಲ್ಲಿಯೇ ಏಕೈಕ ಹೆಣ್ಣುಮಕ್ಕಳ ಶಾಲೆಯಾಗಿದೆ’ ಎಂದು ತಿಳಿಸಿದರು.
ಈ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು 5ನೇ ತರಗತಿ ಪಾಸಾದ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ ಮಾ. 23ರಂದು ನಗರದ ಮೈಲೂರ್ ಕ್ರಾಸ್ನಲ್ಲಿರುವ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ’ ಎಂದರು.
‘ಪ್ರವೇಶ ಪರೀಕ್ಷೆಯು 5ನೇ ತರಗತಿಯ ಕನ್ನಡ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ ಮುಂತಾದ ವಿಷಯಗಳ ಪಠ್ಯದ ಮೇಲೆ ಬಹು ಆಯ್ಕೆಯ ಮಾದರಿಯಲ್ಲಿ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಪಡೆದ 20 ವಿದ್ಯಾರ್ಥಿನಿಯರಿಗೆ 6ರಿಂದ 10ನೇ ತರಗತಿ ವರೆಗೆ ಊಟ, ವಸತಿ ಸಹಿತ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ. ಪರೀಕ್ಷೆಗೆ ಬರುವಾಗ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ, ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ತೆಗೆದುಕೊಂಡು ಬರಬೇಕು. ಹೆಚ್ಚಿನ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಬಸವಲಿಂಗ ದೇವರು, ಸುವರ್ಣಾ ಚಿಮಕೋಡೆ, ಸಂಗ್ರಾಮಪ್ಪ ಇಂಗಳೆ, ಭಾರತಿ ಪಾಟೀಲ, ಶರಣಪ್ಪ ಚಿಮಕೋಡೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.