ADVERTISEMENT

ಬಸವಕಲ್ಯಾಣ: ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:50 IST
Last Updated 27 ಜೂನ್ 2024, 15:50 IST
ಗ್ರಾಮೀಣ ಭಾಗಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಬಸವಕಲ್ಯಾಣದಲ್ಲಿ ಗುರುವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮಿಲಿಂದ್ ಅವರಿಗೆ ಮನವಿ ಸಲ್ಲಿಸಿದರು
ಗ್ರಾಮೀಣ ಭಾಗಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಬಸವಕಲ್ಯಾಣದಲ್ಲಿ ಗುರುವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮಿಲಿಂದ್ ಅವರಿಗೆ ಮನವಿ ಸಲ್ಲಿಸಿದರು   

ಬಸವಕಲ್ಯಾಣ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ವೇಳಾಪಟ್ಟಿಗೆ ಅನುಗುಣವಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಗುರುವಾರ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್‌ ಮಿಲಿಂದ್‌ ಅವರಿಗೆ ಮನವಿ ಸಲ್ಲಿಸಿದರು.

‘ಸರಿಯಾದ ಸಮಯಕ್ಕೆ ಬಸ್ ಸಂಚಾರ ಇಲ್ಲದ್ದರಿಂದ ಶಾಲಾ ಕಾಲೇಜುಗಳ ತರಗತಿಗಳಿಗೆ ಹಾಜರಾಗುವುದಕ್ಕೆ ಅನಾನುಕೂಲ ಆಗುತ್ತಿದೆ. ಇದಲ್ಲದೆ ಬಸ್‌ನಲ್ಲಿ ಜಾಗ ಸಿಗದೆ ಪರದಾಡಬೇಕಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿರುವ ಗ್ರಾಮಗಳಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸಬೇಕು. ಬಸ್ ಪಾಸ್ ಸರಿಯಾದ ಸಮಯಕ್ಕೆ ವಿತರಿಸಬೇಕು’ ಎಂದು ಆಗ್ರಹಿಸಲಾಯಿತು.

‘ನಗರದ ಹೊರ ಭಾಗದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಸ್ ಇಲ್ಲದ್ದರಿಂದ ವಿದ್ಯಾರ್ಥಿಗಳು 3 ಕಿ.ಮೀ. ನಷ್ಟು ನಡೆದುಕೊಂಡು ಹೋಗುತ್ತಾರೆ. ನಗರ ಸಾರಿಗೆ ಬಸ್ ಸಂಚಾರ ಆರಂಭಿಸಬೇಕು’ ಎಂದು ಸಹ ಒತ್ತಾಯಿಸಿದರು.

ADVERTISEMENT

ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ಅರಳಿ, ತಾಲ್ಲೂಕು ಘಟಕದ ಸಂಚಾಲಕ ರಮೇಶ ರಾಠೋಡ, ನಗರ ಘಟಕದ ಕಾರ್ಯದರ್ಶಿ ಮೀನಾಕ್ಷಿ, ಲೋಕೇಶ ಮೋಳಕೆರೆ, ಪವನ ಕುಂಬಾರ, ಸುನಿಲ ವಾಡೇಕರ, ಸ್ಫೂರ್ತಿ, ಸ್ವಾತಿ, ಬಸವರಾಜ, ಭಾಗ್ಯಲಕ್ಷ್ಮಿ, ಸುನಿಲ, ವೈಭವಿ, ಕವಿತಾ, ಶಿವಕುಮಾರ, ವರ್ಷಾ, ಲತಾ ಮತ್ತಿತರ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.