ಹುಮನಾಬಾದ್: ಕೃಷಿ ಎಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಶ್ರಮವಹಿಸಿ ಆಳೆತ್ತರದ ಕಬ್ಬು ಬೆಳೆದಿದ್ದಾರೆ ಕರಬಸಪ್ಪ.
ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ 65 ವಯಸ್ಸಿನ ಪ್ರಗತಿಪರ ರೈತ ಕರಬಸಪ್ಪ ಅವರು ತಮ್ಮ ಒಂದುವರೆ ಎಕರೆಯಲ್ಲಿ ಕಬ್ಬು ನಾಟಿ ಮಾಡಿ ಬರೋಬ್ಬರಿ 20 ಅಡಿ ಎತ್ತರದ ಕಬ್ಬು ಬೆಳೆದು ಹುಬ್ಬೆರಿಸುವಂತೆ ಮಾಡಿದ್ದಾರೆ.
ಕರಬಸಪ್ಪ ಅವರು ಎರಡು ವರ್ಷಗಳ ಹಿಂದೆ ಒಂದು ಕೊಳವೆ ಬಾವಿ ಕೊರೆಸಿದ್ದರು. ಅದರಲ್ಲಿ ಕೇವಲ ಒಂದು ಇಂಚು ನೀರು ಬಂದಿದ್ದ ಕಾರಣ ಕೃಷಿ ಚಟುವಟಿಕೆ ಮಾಡುವುದೇ ಬಿಡಬೇಕು ಎಂದುಕೊಂಡಿದ್ದರು. ಆದರೆ, ಕೃಷಿ ಇಲಾಖೆಯ ಅಧಿಕಾರಿಯೊಬ್ಬರ ಸಲಹೆಯಂತೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಈಗ ಭರಪೂರ ಕಬ್ಬು ಬೆಳೆದಿದ್ದಾರೆ.
ಸಾವಯವ ಪದ್ಧತಿ: 8005 ಎನ್ನುವ ಕಬ್ಬಿನ ತಳಿ ನಾಟಿ ಮಾಡಿದ್ದಾರೆ. ಆರಂಭದಿಂದಲೂ ನೀರು ಹಾಯಿಸುವ ಜತೆಗೆ ಪ್ರತಿ ತಿಂಗಳಿಗೊಮ್ಮೆ ಮನೆಯಲ್ಲಿಯೇ ತಯಾರಿಸಿದ ಗೋಪಾಮೃತ, ಜೀವಾಮೃತವನ್ನೂ ಹರಿಸಿದ್ದಾರೆ. ಈ ವರ್ಷ 140 ಟನ್ ಇಳುವರಿ ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದ ಇದ್ದ ಸ್ವಲ್ಪ ನೀರಿನಲ್ಲಿಯೇ ಉತ್ತಮವಾದ ರೀತಿಯಲ್ಲಿ ಕಬ್ಬಿನ ಬೆಳೆ ಬೆಳೆಯುತ್ತಿದ್ದೇನೆ. ರಾಸಾಯನಿಕ ಗೊಬ್ಬರ ರಹಿತವಾಗಿ ಸಾವಯವ ಗೊಬ್ಬರ ಬಳಕೆ ಮಾಡಿದ್ದರಿಂದ ಖರ್ಚು ಕಡಿಮೆಯಾಗಿದೆ. ಜತೆಗೆ ಕಬ್ಬಿನ ಬೆಳೆ ಉತ್ತಮವಾಗಿ ಬೆಳೆಯಲು ಸಾಧ್ಯವಾಗಿದೆ
-ಕರಬಸಪ್ಪ. ಪ್ರಗತಿಪರ ರೈತ, ಹುಡಗಿ
ಹುಡಗಿ ಗ್ರಾಮದ ರೈತ ಕರಬಸಪ್ಪ ಅವರು ಹನಿ ನೀರಾವರಿ ಮೂಲಕ ಉತ್ತಮ ಬೆಳೆ ಬೆಳೆದಿದ್ದಾರೆ. ತಾಲ್ಲೂಕಿನ ಇತರೆ ರೈತರು ಹೊಸ ಹೊಸ ಬೆಳೆಗಳ ಕುರಿತು ತಿಳಿದುಕೊಳ್ಳಬೇಕು. ಕೃಷಿ ಚಟುವಟಿಕೆಯಲ್ಲಿ ತಾಂತ್ರಿಕ ಯಂತ್ರೋಪಕರಣಗಳ ಸದುಪಯೋಗ ಮಾಡಿಕೊಳ್ಳಬೇಕು.
-ಗೌತಮ್, ಸಹಾಯಕ ಕೃಷಿ ನಿರ್ದೇಶಕ, ಹುಮನಾಬಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.