ಔರಾದ್: ‘ಬಸವಣ್ಣ ಹಾಗೂ ವಚನ ಸಾಹಿತ್ಯ ತಿಳಿದುಕೊಂಡವರು ಮೂಢನಂಬಿಕೆಗೆ ಆಸ್ಪದ ಕೊಡಬಾರದು’ ಎಂದು ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಬಸವ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.
‘ಒಂದು ಕಡೆ ಬಸವಣ್ಣ ಅಂತೀವಿ. ಮತ್ತೊಂದು ಕಡೆ ಹೋಮ ಹವನ ಮಾಡುತ್ತೇವೆ. ಮನೆಯಲ್ಲಿ ಹತ್ತಾರು ಮೂರ್ತಿ ಇಟ್ಟು ಪೂಜೆ ಮಾಡುತ್ತೇವೆ. ಮುಟ್ಟಾ, ತಟ್ಟಿ ಅಂತೀವಿ. ಈ ಎಲ್ಲವೂ ಬಸತತ್ವಕ್ಕೆ ವಿರುದ್ಧವಾದ ಆಚರಣೆಗಳು. ಹೀಗಾಗಿ ಬಸವ ಭಕ್ತರು ಹಾಗೂ ಬಸವಾಭಿಮಾನಿಗಳು ಇಂತಹ ಆಚರಣೆಗೆ ಅವಕಾಶ ಕೊಡಬಾರದು’ ಎಂದು ತಿಳಿಸಿದರು.
‘ನಡೆ-ನುಡಿ ಒಂದಾಗಿರಬೇಕು ಎಂದು ಶರಣರು ಹೇಳಿದ್ದಾರೆ. ಅದರಂತೆ ನಾವು ನಡೆಯಬೇಕು. ದೇವರ ಹೆಸರಿನಲ್ಲಿ ನಡೆಯುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಅದೇ ದುಡ್ಡಿನಲ್ಲಿ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು. ವಾಸ್ತವಿಕ ಹಾಗೂ ವೈಜ್ಞಾನಿಕ ತಹಳದಿಯ ಮೇಲಿರುವ ವಚನ ಸಾಹಿತ್ಯ ಓದಬೇಕು. ಇತರರಿಗೂ ಓದಲು ಪ್ರೇರಣೆ ನೀಡಬೇಕು. ಬಸವಣ್ಣ ಅವರನ್ನು ಕರ್ನಾಟಕ ಸಾಂಸ್ಕøತಿಕ ನಾಯಕರು ಎಂದು ಘೋಷಣೆ ಮಾಡಿದ್ದು ಇಡೀ ನಾಡು ಹೆಮ್ಮೆ ಪಡುವಂತಾಗಿದೆ’ ಎಂದು ಹೇಳಿದರು.
ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ ‘ಬಸವತತ್ವದಿಂದ ಜಗತ್ತು ಭಾರತದ ಕಡೆ ನೋಡುವಂತಾಗಿದೆ’ ಎಂದರು.
ಸಂಗಮ ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಧನರಾಜ ರಾಗಾ ಹಾಗೂ ಸ್ಥಳೀಯ ಗಣ್ಯರು ಇದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಸಾಧಕರನ್ನು ಗೌರವಿಸಲಾಯಿತು.
ಭವ್ಯ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಚನ್ನಬಸವ ಪಟ್ಟದ್ದೇವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬಸವಣ್ಣನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಯುವಕರು, ಮಕ್ಕಳು ವಚನ ನೃತ್ಯ ಮಾಡಿ ಗಮನ ಸೆಳೆದರು.
ಮುಖಂಡ ಕಲ್ಲಪ್ಪ ದೇಶಮುಖ, ತಮ್ಮಣ್ಣ ದೇಗಲವಾಡೆ, ಪ್ರಕಾಶ ಘುಳೆ, ಮಲ್ಲಿಕಾರ್ಜುನ ಟಂಕಸಾಲೆ, ಶರಣಪ್ಪ ನಾಗಲಗಿದ್ದಿ, ಶಿವಕುಮಾರ ಘಾಟೆ, ಶಿವರಾಜ ಶೆಟಕಾರ, ರವಿ ಮೀಸೆ, ಅಮೃತರಾವ ಬಿರಾದಾರ, ಜಗನ್ನಾಥ ಮೂಲಗೆ, ಧನರಾಜ ನಿಟ್ಟೂರೆ, ಅಶೋಕ ಶೆಂಬೆಳ್ಳಿ, ಸಂದೀಪ ಪಾಟೀಲ, ಶಂಕು ನಿಸ್ಪತೆ, ಸಂಜು ಚಲವಾ, ಅಂಬಾದಾಸ ನೇಳಗೆ, ಶರಣಪ್ಪ ಪಾಟೀಲ ಸೇರಿದಂತೆ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.