ಬೀದರ್: ‘ದೇಶದಲ್ಲಿ ಈಗ ನಿರುದ್ಯೋಗದ ಸಮಸ್ಯೆಯೇ ಇಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ತಿಳಿಸಿದರು.
‘ನಿರುದ್ಯೋಗ ಹಾಗೂ ಬೆಲೆ ಏರಿಕೆ ಈಗಲೂ ಜನರನ್ನು ಕಾಡುತ್ತಿದೆ. ಇದರಿಂದ ಬಿಜೆಪಿ ಮೇಲೆ ಪರಿಣಾಮ ಆಗುವುದಿಲ್ಲವೇ?’ ಎಂದು ನಗರದಲ್ಲಿ ಗುರುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
2002ರಲ್ಲಿ ನಾನು ಮೊದಲ ಸಲ ಶಾಸಕನಾಗಿದ್ದೆ. ಆಗ ನನ್ನ ಮನೆಗೆ ನೌಕರಿ ಕೇಳಿಕೊಂಡು ಜನ ಬರುತ್ತಿದ್ದರು. ಆಗ ನಾನು ನೌಕರಿ ಕೊಡಿಸುವ ಪರಿಸ್ಥಿತಿಯಲ್ಲೂ ಇರಲಿಲ್ಲ. ಆದರೆ, 20 ವರ್ಷಗಳ ನಂತರ ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ ಬಳಿಕ ಜನರಿಗೆ ನೌಕರಿ ಕೊಡಿಸುವ ಸ್ಥಾನದಲ್ಲಿದ್ದೇನೆ. ಆದರೆ, ಯಾರು ನೌಕರಿ ಕೇಳಿಕೊಂಡು ನನ್ನ ಬಳಿ ಬರುತ್ತಿಲ್ಲ. ನಿರುದ್ಯೋಗವನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ. ಯಾರು ಕೆಲಸ ಮಾಡಬೇಕು ಅಂದುಕೊಂಡಿದ್ದಾರೆ ಅಂತಹವರ ಬಳಿ ಕೆಲಸವಿದೆ ಎಂದರು.
ಕೆ.ಎಸ್. ಈಶ್ವರಪ್ಪ ಅವರು ಅವರ ತಪ್ಪು ಸುಧಾರಿಸಿಕೊಳ್ಳುವವರೆಗೆ ಅವಕಾಶ ನೀಡುತ್ತೇವೆ. ಎಲ್ಲಿಯವರೆಗೆ ಅವರು ನಾಮಪತ್ರ ತುಂಬುವುದಿಲ್ಲವೋ ಅಥವಾ ನಾಮಪತ್ರ ಸಲ್ಲಿಸಿದ ನಂತರ ತಪ್ಪಿನ ಅರಿವಾಗಿ ನಾಮಪತ್ರ ಹಿಂಪಡೆಯುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ಪಕ್ಷ ಅವಕಾಶ ನೀಡುತ್ತದೆ ಎಂದು ಹೇಳಿದರು.
ಯಾವುದೇ ಒಂದು ರಾಜ್ಯ, ಮುಖ್ಯಮಂತ್ರಿ ಅಥವಾ ಪ್ರಧಾನಿಗೆ ಸಂಬಂಧಿಸಿರುವುದಿಲ್ಲ. ಅದು ಜನರ ರಾಜ್ಯವಾಗಿರುತ್ತದೆ. ಬರ ಪರಿಹಾರದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಂಕಾರ ಬಿಡಬೇಕು. ಇಲ್ಲವಾದರೆ ಅವರ ಅಹಂಕಾರವನ್ನು ಜನ ದೂರ ಮಾಡುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.