ADVERTISEMENT

ಹರಿಹರ- ರಾಘವಾಂಕರ ಕಾವ್ಯದಲ್ಲಿ ವೀರಶೈವ ಪದವಿಲ್ಲ: ಗುರುಲಿಂಗಪ್ಪ ಧಬಾ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:30 IST
Last Updated 6 ಜುಲೈ 2024, 16:30 IST
   

ಬಸವಕಲ್ಯಾಣ: ‘ಸಿದ್ಧರಾಮೇಶ್ವರ ಹಾಗೂ ಇತರೆ ಶರಣರ ಚರಿತ್ರೆ ಬರೆದಿರುವ ಹರಿಹರ- ರಾಘವಾಂಕರ ಕಾವ್ಯದಲ್ಲಿ ವೀರಶೈವ ಪದ ಎಲ್ಲಿಯೂ ಬಳಕೆ ಆಗಿಲ್ಲ’ ಎಂದು ಅಕ್ಕಲಕೋಟದ ಖೇಡಗಿ ಬಸವೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಗುರುಲಿಂಗಪ್ಪ ಧಬಾಲೆ ತಿಳಿಸಿದರು.

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ವತಿಯಿಂದ ಶನಿವಾರ ನಡೆದ ‘ಶಿವಯೋಗಿ ಸಿದ್ಧರಾಮ ಸಾಂಸ್ಕೃತಿಕ ಮುಖಾಮುಖಿ’ ರಾಷ್ಟ್ರೀಯ ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯಲ್ಲಿ ಅವರು ಮಾತನಾಡಿದರು

‘ಇವರ ಕಾವ್ಯದಲ್ಲಿ ಅಲ್ಲಮಪ್ರಭು ಮತ್ತು ಸಿದ್ಧರಾಮೇಶ್ವರರ ಭೇಟಿಯ ಉಲ್ಲೇಖವಿದೆ. ಈ ಭೇಟಿಯ ನಂತರ ಸಿದ್ಧರಾಮರ ಜೀವನದಲ್ಲಿ ಆಮೂಲಾಗ್ರ ಬದಲಾವಣೆ ಆಗುತ್ತದೆ. ಈ ಕವಿಗಳು ಲಿಂಗಾಯತರು ಎಂಬುದು ನನ್ನ ಸ್ಪಷ್ಟ ನಿಲುವು. ಅವರು ಶರಣತತ್ವ ಅರಿತು ಅದನ್ನು ಅನುಷ್ಠಾನಕ್ಕೆ ತರುವುದಕ್ಕಾಗಿ ಪ್ರಯತ್ನಿಸಿದ್ದಾರೆ. ಇಂಥ ಕಾರ್ಯ ಮಾಡಿದವರು ಯಾರೇ ಇದ್ದರೂ ಅವರನ್ನು ಲಿಂಗಾಯತ ಎಂದರೆ ತಪ್ಪೇನು’ ಎಂದರು.

ADVERTISEMENT

ಸಾಹಿತಿ ವಿ.ಎಸ್.ಮಾಳಿ ಮಾತನಾಡಿ, ‘ಸಿದ್ಧರಾಮೇಶ್ವರ ಕುರಿತಾದ 39 ಶಾಸನಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ದೊರೆತಿವೆ. 12 ನೇ ಶತಮಾನದ ಯಾವುದೇ ಶರಣರ ಬಗ್ಗೆ ಇಷ್ಟೊಂದು ಶಾಸನಗಳು ಲಭ್ಯವಾಗಿಲ್ಲ’ ಎಂದರು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಶಿವಗಂಗಾ ರುಮ್ಮಾ, ಪ್ರೊ.ಇಂದುಮತಿ ಪಾಟೀಲ, ಮೀನಾಕ್ಷಿ ಬಿರಾದಾರ, ಧಾರವಾಡ ಬಸವಾನಂದ ಸ್ವಾಮೀಜಿ, ಸುಮಂಗಲಾ ರೆಡ್ಡಿ, ಸಾರಿಕಾದೇವಿ ಕಾಳಗಿ ಮಾತನಾಡಿದರು.

ಶೂನ್ಯ ಸಂಪಾದನೆ: ಎರಡನೇ ಗೋಷ್ಠಿಯಲ್ಲಿ ಪ್ರೊ.ಕೆ.ರವೀಂದ್ರನಾಥ ಮಾತನಾಡಿ, `ಶೂನ್ಯ ಸಂಪಾದನೆಯಲ್ಲಿ ಸಿದ್ಧರಾಮರ ಬಗ್ಗೆ ಮಾಹಿತಿಯಿದೆ' ಎಂದರು.

ಸಂಗನಬಸವ ಸ್ವಾಮೀಜಿ, ಉಪನ್ಯಾಸಕ ರಣಧೀರ ಬೇಲೂರ, ಎ.ವಿ.ಕಮಲಮ್ಮ, ಶಿವರಾಜಶಾಸ್ತ್ರೀ ಹೇರೂರು, ಶೈಲಜಾ ಬಾಗೇವಾಡಿ, ರವೀಂದ್ರ ಕೊಳಕೂರ, ಚಿದಾನಂದ ಚಿಕ್ಕಮಠ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.