ಬೀದರ್: ವಾಸವಿ ಕನ್ನಿಕಾ ಪರಮೇಶ್ವರಿ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಸಂಜೆ ಭವ್ಯ ಮೆರವಣಿಗೆ ನಡೆಯಿತು.
ವಾಸವಿ ಪರಮೇಶ್ವರಿಯ ಭಾವಚಿತ್ರ ಅಲಂಕರಿಸಿದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಪುಣೆಯ ಕಲಾವಿದರ ಡೊಳ್ಳು ಕಲೆ ಗಮನ ಸೆಳೆಯಿತು. ಬ್ಯಾಂಡ್, ನೃತ್ಯ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು.
ಮೆರವಣಿಗೆಯು ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ವಿನಾಯಕ್ ವೃತ್ತ ಮುಖ್ಯ ರಸ್ತೆ, ಚೌಬಾರ, ಮಾರ್ಗವಾಗಿ ಪುನಃ ದೇವಸ್ಥಾನಕ್ಕೆ ತಲುಪಿತು.
ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು, ವಾಸವಿ ಮಹಿಳಾ ಮಂಡಳ, ವಾಸವಿ ಯುವತಿ ಸಂಘ, ವಾಸವಿ ಕಿಶೋರ ಸಂಘ, ವಾಸವಿ ಗೆಳೆಯರ ಬಳಗ, ಕನ್ಯಕಾ ಪರಮೇಶ್ವರಿ ಮಿತ್ರ ಮಂಡಳದ ಎಲ್ಲಾ ಪದಾಧಿಕಾರಿಗಳು, ಭಕ್ತಾದಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಬೆಳಿಗ್ಗೆ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ನಡೆಯಿತು. ಮಧ್ಯಾಹ್ನ 12ಕ್ಕೆ ತೊಟ್ಟಿಲು ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಲಾಯಿತು. ಸಂಜೆ 6ಕ್ಕೆ ಮಹಿಳೆಯರ ಕೋಲಾಟ ಗಮನ ಸೆಳೆಯಿತು.
ಸಂಘದ ಅಧ್ಯಕ್ಷ ಡಿ.ವಿ. ಸಿಂದೋಲ, ಉಪಾಧ್ಯಕ್ಷ ದಿಗಂಬರ ಪೋಲ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೋಲಾ, ಕಾರ್ಯದರ್ಶಿ ಚಂದ್ರಶೇಖರ ಗಾದಾ, ವೆಂಕಟೇಶ ಪಿ. ಗಾದಾ, ಖಜಾಂಚಿ ಸುನೀಲ ಸೇರಿದಂತೆ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.