ADVERTISEMENT

ಬೀದರ್ | ವಕ್ಫ್‌ ಆಸ್ತಿ ಯಾರೇ ಅತಿಕ್ರಮಿಸಿದರೂ ತೆರವು: ಜಮೀರ್‌ ಅಹಮ್ಮದ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 15:56 IST
Last Updated 24 ಜೂನ್ 2024, 15:56 IST
ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ವಕ್ಫ್‌ ಅದಾಲತ್‌ನಲ್ಲಿ ಸಚಿವ ಬಿ.ಝಡ್‌. ಜಮೀರ್‌ ಅಹಮ್ಮದ್‌ ಖಾನ್‌ ಮಾತನಾಡಿದರು
ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ವಕ್ಫ್‌ ಅದಾಲತ್‌ನಲ್ಲಿ ಸಚಿವ ಬಿ.ಝಡ್‌. ಜಮೀರ್‌ ಅಹಮ್ಮದ್‌ ಖಾನ್‌ ಮಾತನಾಡಿದರು   

ಬೀದರ್‌: ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್‌. ಜಮೀರ್‌ ಅಹಮ್ಮದ್‌ ಖಾನ್‌ ಅವರು ಸೋಮವಾರ ಗಡಿ ಜಿಲ್ಲೆ ಬೀದರ್‌ ಮೂಲಕ ರಾಜ್ಯದ ಮೊದಲ ವಕ್ಫ್‌ ಅದಾಲತ್‌ ಕುಂದು ಕೊರತೆ ಸಭೆ ಆರಂಭಿಸಿದರು.

ಪ್ರತಿ ತಿಂಗಳು ಮೂರು ಜಿಲ್ಲೆಗಳಲ್ಲಿ ವಕ್ಫ್‌ ಅದಾಲತ್‌ ನಡೆಸಿ, ಜನರ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ಒದಗಿಸಲಾಗುವುದು. ವಕ್ಪ್ ಆಸ್ತಿ ಯಾರದ್ದೂ ಅಲ್ಲ, ಅದು ಭಗವಂತನದು. ಅದನ್ನು ಯಾರೇ ಅತಿಕ್ರಮಿಸಿದರೂ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ನಗರದ ಹೈದರಾಬಾದ್‌ ರಸ್ತೆಯ ಪಟೇಲ್‌ ಫಂಕ್ಷನ್‌ ಹಾಲ್‌ನಲ್ಲಿ ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆ, ಕರ್ನಾಟಕ ರಾಜ್ಯ ಔಕಾಫ್ ಮಂಡಳಿ ಸಹಯೋಗದಲ್ಲಿ ಏರ್ಪಡಿಸಿದ್ದ ವಕ್ಪ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. 178 ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಅವರ ಸಮಸ್ಯೆ ಆಲಿಸಿದ ಸಚಿವರು, ವಕ್ಪ್ ಜಮೀನಿನ ಆಸ್ತಿ ಅತಿಕ್ರಮಣ, ಖಾತಾ ಬದಲಾವಣೆ, ಖಬರಸ್ತಾನಗಳಿಗೆ ಸಂಬಂಧಿಸಿದಂತೆ ಜನ ಹೆಚ್ಚಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಲಮಿತಿಯಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು.

ಮುಸ್ಲಿಂ ಸಮುದಾಯದ ಜನರು ಹೆಚ್ವಿರುವ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಇಲ್ಲದಿದ್ದರೆ ಅಲ್ಲಿ ಸರ್ಕಾರಿ ಜಾಗವಿದ್ದಲಿ ಅದನ್ನು ಸ್ಮಶಾನ ಭೂಮಿಗೆ ಜಾಗ ನೀಡಲು ಅವಕಾಶವಿದೆ. ಕಲಬುರಗಿ, ಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಕಡೆ ಹಜ್ ಭವನಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಬೀದರ್‌ ಜಿಲ್ಲೆಗೆ ಮೂರು ದಿನ ಸಮಯ ನೀಡಿ ನಮ್ಮ ಜಿಲ್ಲೆಯ ವಕ್ಪ್ ಜಮೀನಿನ ಸಮಸ್ಯೆಗಳನ್ನು ಆಲಿಸುತ್ತಿರುವ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರ ಕೆಲಸ ಶ್ಲಾಘನಾರ್ಹವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ ಮಾತನಾಡಿ, ಸ್ಮಶಾನ ಭೂಮಿ ಹಾಗೂ ಮಸೀದಿಗಳ ಸಮಸ್ಯೆಗಳನ್ನು ತೆಗೆದುಕೊಂಡು ಅನೇಕರು ಅರ್ಜಿಗಳನ್ನು ಕೊಟ್ಟಿದ್ದಾರೆ. ವಕ್ಪ್ ಆಸ್ತಿ ಬಹಳಷ್ಟು ಕಡೆ ಅತಿಕ್ರಮಿಸಲಾಗಿದೆ. ಅವುಗಳಿಗೆ ಸರ್ಕಾರ ಪರಿಹಾರ ಕಲ್ಪಿಸಲಿದೆ ಎಂದರು.

ವಕ್ಪ್ ಬೋರ್ಡ್ ರಾಜ್ಯ ಘಟಕದ ಅಧ್ಯಕ್ಷ ಅನ್ವರ್‌ ಬಾಷಾ ಮಾತನಾಡಿ, ಜನ ಪ್ರತಿಯೊಂದಕ್ಕೂ ಬೆಂಗಳೂರಿಗೆ ಅಲೆಯುವಂತಾಗಬಾರದು ಎಂಬ ಕಾರಣಕ್ಕಾಗಿ ವಕ್ಫ್‌ ಅದಾಲತ್‌ ಜಿಲ್ಲಾಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.

ನಗರಸಭೆ ಅಧಕ್ಷ ಮಹಮ್ಮದ್‌ ಗೌಸ್, ಬೀದರ್‌ ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಮಹಮ್ಮದ್‌ ಫಿರೋಜ್ ಖಾನ್‌, ಕಾಂಗ್ರೆಸ್ ಮುಖಂಡರಾದ ಅಯಾಜ್‌ ಖಾನ್‌ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ –ಪ್ರಜಾವಾಣಿ ಚಿತ್ರಗಳು
ಅವ್ಯವಸ್ಥೆಗೆ ಸಚಿವರು ಗರಂ
ವಕ್ಫ್‌ ಅದಾಲತ್‌ನಲ್ಲಿ ಅರ್ಜಿ ಸಲ್ಲಿಸಲು ಜನ ಮುಗಿಬಿದ್ದಿದ್ದರು. ವೇದಿಕೆ ಕಾಣದಂತೆ ಮಾಧ್ಯಮದವರು ಸುತ್ತುವರೆದಿದ್ದರು. ಇದಕ್ಕೆ ಗರಂ ಆದ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ‘ಎಲ್ಲರೂ ಒಟ್ಟಿಗೆ ವೇದಿಕೆಯ ಕಡೆಗೆ ಬರುವುದು ಬೇಡ. ಟೋಕನ್‌ ಸಂಖ್ಯೆ ಕರೆಯುತ್ತಾರೆ. ಅದಕ್ಕೆ ತಕ್ಕಂತೆ ಒಬ್ಬೊಬ್ಬರಾಗಿ ಬಂದು ಸಮಸ್ಯೆ ಹೇಳಿಕೊಳ್ಳಬೇಕು. ಯಾರೂ ಕೂಡ ಅನಗತ್ಯವಾಗಿ ಓಡಾಡಬಾರದು. ಗದ್ದಲ ಮಾಡಬಾರದು. ಮಾಧ್ಯಮದವರು ವೇದಿಕೆಯನ್ನು ಸುತ್ತುವರಿದರೆ ದೂರದ ಊರುಗಳಿಂದ ಬಂದವರಿಗೆ ಏನಾಗುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ದಯವಿಟ್ಟು ಎಲ್ಲರಿಗೂ ಆಸನಗಳ ವ್ಯವಸ್ಥೆ ಮಾಡಲಾಗುವುದು. ಶಿಸ್ತಿನಿಂದ ಕುಳಿತುಕೊಳ್ಳಬೇಕು’ ಎಂದು ಹೇಳಿ ಕುರ್ಚಿಗಳನ್ನು ತರಿಸಿದರು. ಸಚಿವರ ಈ ಕ್ರಮವನ್ನು ಜನ ಚಪ್ಪಾಳೆ ಹೊಡೆದು ಸ್ವಾಗತಿಸಿದರು.
‘ಕಾರ್ಯಕ್ರಮ ನಡೆಯುತ್ತಿರುವ ಜಾಗವೂ ವಕ್ಫ್‌ನದ್ದು’
‘ವಕ್ಫ್‌ ಅದಾಲತ್‌ ನಡೆಸುತ್ತಿರುವ ಈ ಪಟೇಲ್‌ ಫಂಕ್ಷನ್‌ ಹಾಲ್‌ ವಕ್ಫ್‌ ಬೋರ್ಡ್‌ಗೆ ಸೇರಿದೆ. ಸರ್ವೇ ನಂಬರ್‌ 62ರಲ್ಲಿ ಬರುತ್ತದೆ. ಹೀಗೆ ಹಲವು ಕಡೆ ವಕ್ಫ್‌ ಆಸ್ತಿ ಬೇಕಾಬಿಟ್ಟಿ ಕಬಳಿಸಿದ್ದಾರೆ. ಅದನ್ನು ವಕ್ಫ್‌ ಬೋರ್ಡ್‌ ಅಧೀನಕ್ಕೆ ತೆಗೆದುಕೊಳ್ಳಬೇಕು’ ಎಂದು ಸೈಫುಲ್ಲಾ ಎಂಬುವರು ಸಚಿವರಿಗೆ ಮನವಿ ಮಾಡಿದರು. ಈ ವಿಷಯ ತಿಳಿದು ಅಲ್ಲಿದ್ದವರು ಒಂದುಕ್ಷಣ ಅಚ್ಚರಿಗೊಂಡರು. ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಪ್ರತಿಕ್ರಿಯಿಸಿ ಯಾರೇ ಇರಲಿ ವಕ್ಫ್‌ ಆಸ್ತಿ ಅತಿಕ್ರಮಿಸಿ ಆಸ್ಪತ್ರೆ ಸೇರಿದಂತೆ ಏನೇ ನಿರ್ಮಿಸಿದರೂ ಅದನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
‘ಮುಸ್ಲಿಮರ ಮತಗಳಿಂದ ಸಾಗರ್‌ ಖಂಡ್ರೆ ಗೆದ್ದದ್ದು’
‘ನಮ್ಮ ಮುಸ್ಲಿಮರ ಮತಗಳಿಂದ ಬೀದರ್‌ ಸಂಸದ ಸಾಗರ್‌ ಖಂಡ್ರೆಯವರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ತಂದೆ ಸಚಿವ ಈಶ್ವರ ಬಿ. ಖಂಡ್ರೆಯವರು ಪರಿಚಿತರು. ಅಂತ್ಯಸಂಸ್ಕಾರಕ್ಕೆ ಅರಣ್ಯ ಜಾಗ ಬಿಟ್ಟುಕೊಡುವ ವಿಚಾರದ ಕುರಿತು ಅವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು’ ಎಂದು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಭರವಸೆ ನೀಡಿದರು. ವ್ಯಕ್ತಿಯೊಬ್ಬರು ‘ಮೃತರ ಅಂತ್ಯಸಂಸ್ಕಾರಕ್ಕೆ ಖಬರಸ್ತಾನ ಇಲ್ಲ. ಈ ಹಿಂದಿನಿಂದಲೂ ಅರಣ್ಯ ಜಮೀನಿನಲ್ಲಿ ಮಾಡಲಾಗುತ್ತಿದೆ. ಈಗ ಅವಕಾಶ ಕಲ್ಪಿಸುತ್ತಿಲ್ಲ’ ಎಂದು ಹೇಳಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.
‘ಖಬರಸ್ತಾನದ ನಂತರ ಕಾಂಪೌಂಡ್‌’
‘ನಿಮಗೆ ಅಂತ್ಯಸಂಸ್ಕಾರಕ್ಕೆ ಖಬರಸ್ತಾನಕ್ಕೆ ಜಮೀನು ಬೇಕು. ಅದನ್ನು ಪರಿಶೀಲಿಸಿ ಒದಗಿಸಲಾಗುವುದು. ಇನ್ನೂ ಖಬರಸ್ತಾನಕ್ಕೆ ಜಮೀನೇ ಅಂತಿಮಗೊಂಡಿಲ್ಲ. ಈಗಲೇ ಕಾಂಪೌಂಡ್‌ ನಿರ್ಮಿಸಿಕೊಡಬೇಕೆಂದು ಕೇಳಿದರೆ ಹೇಗೆ? ಒಂದು ಕೆಲಸ ಮುಗಿದ ನಂತರ ಇನ್ನೊಂದು ಕೆಲಸ ಮಾಡುವ’ ಎಂದು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಹೇಳಿದರು. ನಾಲ್ಕೈದು ಜನ ಒಟ್ಟಿಗೆ ವೇದಿಕೆ ಬಳಿ ಬಂದು ನಮ್ಮ ಊರಿನಲ್ಲಿ ಖಬರಸ್ತಾನಕ್ಕೆ ಜಾಗ ಕೊಡಬೇಕು ಎಂದು ಕೋರಿದರು. ಅದಕ್ಕೆ ಸಚಿವರು ಮಾಡಿಕೊಡುವೆ ಎಂದರು. ಅದಕ್ಕೆ ಕಾಂಪೌಂಡ್‌ ಕೂಡ ನಿರ್ಮಿಸಬೇಕು ಎಂದರು. ಆಗ ಸಚಿವರು ಮೇಲಿನಂತೆ ಹೇಳಿದರು.
‘ಉಪಗ್ರಹ ಆಧರಿತ ಸರ್ವೇ ಕೈಗೊಳ್ಳಿ’
‘ರಾಜ್ಯದ ಹಲವೆಡೆ ವಕ್ಫ್‌ ಬೋರ್ಡ್‌ಗೆ ಸೇರಿದ ಆಸ್ತಿ ಇದೆ. ಆದರೆ ಸರಿಯಾದ ರೀತಿಯಲ್ಲಿ ಸರ್ವೇ ನಡೆಸಿ ಅದನ್ನು ಗುರುತಿಸಿಲ್ಲ. ಆದಕಾರಣ ಉಪಗ್ರಹ ಆಧರಿತ ಸರ್ವೇ ಕೈಗೊಳ್ಳಬೇಕು. ಅನೇಕ ಕಡೆಗಳಲ್ಲಿ ವಕ್ಫ್‌ ಆಸ್ತಿಯಲ್ಲಿ ಲೇಔಟ್‌ ನಿರ್ಮಿಸಲಾಗಿದೆ. ವಕ್ಫ್‌ ಬೋರ್ಡ್‌ಗೆ ವಿಶೇಷ ಅಧಿಕಾರ ಕೊಡಬೇಕು. ಈ ಕುರಿತು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಬೇಕು’ ಎಂದು ಮುಖಂಡ ಸೈಫುಲ್ಲಾ ಬೇಗ್‌ ಎಂಬುವರು ಆಗ್ರಹಿಸಿದರು. ಇದನ್ನು ಪರಿಶೀಲಿಸುವೆ ಎಂದಷ್ಟೇ ಸಚಿವ ಜಮೀರ್ ಅಹಮ್ಮದ್‌ ಖಾನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.