ಬೀದರ್: ವಿವಿಧ ಸಂಘ– ಸಂಸ್ಥೆಗಳಿಂದ ಬುಧವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ: ನಗರದ ಗುರುನಾನಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬೀದರ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ಉದ್ಘಾಟಿಸಿದರು. ‘ಪರಿಸರ ಉಳಿದರೆ ಮಾತ್ರ ಮನುಕುಲ ಹಾಗೂ ಜೀವರಾಶಿ ಬದುಕಲು ಸಾಧ್ಯ. ಪರಿಸರ ನಾಶದಿಂದ ಮನುಷ್ಯನ ವಿನಾಶಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಹಾಗೂ ಪಶು-ಪಕ್ಷಿಗಳ ರಕ್ಷಿಸುವ ಮೂಲಕ ಪರಿಸರದ ಸಂರಕ್ಷಣೆ ಮಾಡಬೇಕು’ ಎಂದು ತಿಳಿಸಿದರು.
‘ಪ್ರತಿಯೊಂದು ಜೀವಿಯ ನೆಲೆಯಾಗಿರುವ ಭೂಮಿಯನ್ನು ಉಳಿಸಬೇಕಾದರೆ ನೀರು, ಗಾಳಿ, ಮಾಲಿನ್ಯ ತಡೆದು ಪರಿಸರ ಸಂರಕ್ಷಿಸಬೇಕು. ಆಹಾರ ಉತ್ಪದನೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆ ನಿಲ್ಲಿಸಬೇಕು’ ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ವೀರಶೆಟ್ಟಿ ಮೈಲೂರ್ಕರ ಮಾತನಾಡಿ, ‘ಕೈಗಾರೀಕರಣ, ನಗರೀಕರಣ ಹಾಗೂ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗೆ ಗಿಡ–ಮರಗಳನ್ನು ರಕ್ಷಿಸಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪ್ರತಿಯೊಬ್ಬರೂ ಕನಿಷ್ಠ ಪ್ರತಿವರ್ಷ ಒಂದು ಸಸಿ ನೆಡಬೇಕು’ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುರೇಂದರ್ ಸಿಂಗ್, ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿ ವೈಜಿನಾಥ ಕಮಠಾಣೆ, ಪ್ರಾಂಶುಪಾಲೆ ಶ್ಯಾಮಲ ದತ್ತ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕ ಜಗದೀಶ ಅಕ್ಕಿ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಸಂಜಯ ಮೈನಾಳೆ, ಗೌರಮ್ಮ ಮಠಪತಿ, ನಾಗೇಶ ಯರನಾಳೆ, ರೆಹಮಾನ್ ಖಾನ್, ವೈಜಿನಾಥ ಪಾಟೀಲ ಹಾಜರಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ): ಸಂಘಟನೆಯಿಂದ ನಗರದ ವಿದ್ಯಾಶ್ರೀ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಎಬಿವಿಪಿ ಅಧ್ಯಕ್ಷ ಸಂತೋಷ್ ಹಂಗರಗಿ ಮಾತನಾಡಿ, ‘ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಅದನ್ನು ನಾವೆಲ್ಲರೂ ಪಾಲಿಸಬೇಕು’ ಎಂದು ತಿಳಿಸಿದರು.
ಅಮಿತ್ ರೆಡ್ಡಿ ಮಾತನಾಡಿ, ‘ಮನುಷ್ಯನಿಗೂ ಪರಿಸರಕ್ಕೂ ಬಹಳ ಅನನ್ಯ ಸಂಬಂಧವಿದೆ. ಅದನ್ನು ಪ್ರತಿಯೊಬ್ಬರೂ ರಕ್ಷಿಸಬೇಕು. ರಾಜ್ಯದಲ್ಲಿ ಸಂಘಟನೆಯಿಂದ 10 ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಲಾಗಿದೆ’ ಎಂದರು.
ಶಾಲೆಯ ಆಡಳಿತಾಧಿಕಾರಿ ರೇಣುಕಾ ಮಂಗಲಿ, ಎಬಿವಿಪಿಯ ಸಂಘಟನಾ ಕಾರ್ಯದರ್ಶಿ ಹೇಮಂತ, ಮುಖ್ಯಶಿಕ್ಷಕ ರಾಘವೇಂದ್ರ ಕುಲಕರ್ಣಿ, ಸಾಯಿಕಿರಣ, ನಾಗರಾಜ್, ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರ, ಶಿವಕಾಂತ್ ಪಾಟೀಲ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.