ಬೀದರ್: ನಗರದಿಂದ ಹತ್ತು ಜನ ಯುವಕರ ತಂಡವೊಂದು ಬೈಸಿಕಲ್ ಮೇಲೆ ಸೋಮವಾರ ಅಯೋಧ್ಯೆಯ ರಾಮಮಂದಿರಕ್ಕೆ ಪಯಣ ಬೆಳೆಸಿತು.
ಈ ರಾಮ ಭಕ್ತರು 21 ದಿನಗಳಲ್ಲಿ 1,300 ಕಿ.ಮೀ ಕ್ರಮಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರತಿದಿನ 60 ರಿಂದ 80 ಕಿ.ಮೀ ಕ್ರಮಿಸಲು ಯೋಜನೆ ಹಾಕಿಕೊಂಡಿದ್ದಾರೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅದೇ ದಿನ ಅಲ್ಲಿಗೆ ತಲುಪಲು ಯೋಜಿಸಿದ್ದಾರೆ. ಇದಕ್ಕಾಗಿ ಅವರು ಹಲವು ದಿನಗಳ ಹಿಂದಿನಿಂದ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರತಿದಿನ 20 ಕಿ.ಮೀ ಬೈಸಿಕಲ್ ಓಡಿಸಿ, ದೂರ ಕ್ರಮಿಸಲು ಮಾನಸಿಕವಾಗಿ ಸಿದ್ಧವಾದ ನಂತರ ಸೋಮವಾರ ನಗರದಿಂದ ನಿರ್ಗಮಿಸಿದರು.
ನಗರದ ಚಿದ್ರಿ ರಸ್ತೆಯಲ್ಲಿನ ಹನುಮಾನ ಮಂದಿರದಿಂದ ಹನುಮಾನ ಸೇನೆಯ ಅಜಯ್ ಶರ್ಮಾ, ವಿಜಯ ಶರ್ಮಾ, ಉದಯ ಶರ್ಮಾ, ಭವಾನೇಶ್, ಅಂಬರೀಶ್, ಜಗದೀಶ್, ವಿಷ್ಣು, ಅಭಿಷೇಕ, ಸಾಯಿನಾಥ ಬಾವಗಿ ಬೈಸಿಕಲ್ ಏರಿ, ರಾಮನಿಗೆ ಘೋಷಣೆ ಹಾಕಿ ಪಯಣ ಆರಂಭಿಸಿದರು. ಪ್ರೀತಿಪಾತ್ರರು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು. ಈ ತಂಡವು ಅಯೋಧ್ಯೆಯಿಂದ ಬೀದರ್ಗೆ ವಾಹನದಲ್ಲಿ ಮರಳಲಿದೆ.
ಯುವಕರ ತಂಡ ಮೊದಲ ದಿನ ತೆಲಂಗಾಣದ ನಾರಾಯಣಖೇಡದ ಸಾಯಿ ಮಂದಿರ ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಲಿದೆ. ನಂತರ ಬಿಚಕುಂದಾ, ನಿಜಾಮಾಬಾದ್, ಆದಿಲಾಬಾದ್, ನಾಡಕಿ, ಪಟ್ಟನಾ, ಮಾನೇಗಾಂವ, ಶಿಹೋರಾ, ಜುಕೇನಿ, ಅಮರ್ ಪತಾಕ್, ರೇವಾ, ಗರಾವ್, ಪ್ರಯಾಗರಾಜ್ ಹಾಗೂ ಪ್ರತಾಪಗಢದ ಮೂಲಕ ಅಯೋಧ್ಯೆ ತಲುಪಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.