ADVERTISEMENT

ಗುಂಡ್ಲುಪೇಟೆ: ತಾಯಿ ನಿರೀಕ್ಷೆಯಲ್ಲಿ ಮರಿ ಚಿರತೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 0:27 IST
Last Updated 31 ಮೇ 2024, 0:27 IST
ತಾಯಿಗಾಗಿ ಹಾತೊರೆಯುತ್ತಿರುವ ಚಿರತೆ ಮರಿ.
ತಾಯಿಗಾಗಿ ಹಾತೊರೆಯುತ್ತಿರುವ ಚಿರತೆ ಮರಿ.   

ಗುಂಡ್ಲುಪೇಟೆ: ತಾಲ್ಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬ ರೈತನ ಜಮೀನಿನಲ್ಲಿ ಪತ್ತೆಯಾಗಿದ್ದ ಮರಿ ಚಿರತೆ ತನ್ನ ತಾಯಿಗೆ ಕಾಯುವಂತಿದೆ.

ಪಡಗೂರು ಗ್ರಾಮದ ಶಿವಕುಮಾರ್ ತೋಟದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಬೇಟೆಗಾಗಿ ಬುಧವಾರ ತನ್ನ ಮರಿಯನ್ನು ಬಿಟ್ಟು ಹೋಗಿರುವ ಚಿರತೆ ಎರಡನೇ ದಿನ ಗುರುವಾರವೂ ವಾಪಸ್ ಬಂದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಕಬ್ಬಿನ ಗದ್ದೆಯಲ್ಲಿ ಬೋನ್ ಇರಿಸಿ ಅದರೊಳಗೆ ಚಿರತೆ ಮರಿಯನ್ನಿಟ್ಟು ತಾಯಿ ಚಿರತೆ ಆಗಮನದ ನಿರೀಕ್ಷೆಯಲ್ಲಿದ್ದಾರೆ.

 ಮರಿ ಬಿಟ್ಟು ಹೋಗಿರುವ ಕಾರಣ ಹುಡುಕಿ ವಾಪಸ್ ಬರುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಜಮೀನಿನಲ್ಲಿ ಬೋನ್ ಇರಿಸಲಾಗಿದೆ. ಜೊತೆಗೆ ಸುತ್ತಲು ಸಿಸಿ ಕ್ಯಾಮರಾ ಅಳವಡಿಸಿದ್ದು, ಚಿರತೆ ಚಲನವಲನ ಮೇಲೆ ನಿಗಾ ಹಿಡಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

‘ಮರಿಗೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮೂರು ವೇಳೆ ಹಾಲು ಕುಡಿಸಲಾಗಿದ್ದು, ಆರೋಗ್ಯದಿಂದ ಇದೆ. ಸ್ಥಳದಲ್ಲೇ ಅರಣ್ಯಾಧಿಕಾರಿಗಳು ಇದ್ದು ತಾಯಿ ಚಿರತೆ ಜೊತೆ ಮರಿ ಸೇರಿಸಲು ಕಾರ್ಯಾಚರಣೆ ರೂಪಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದರು.

ರಾತ್ರಿ ವೇಳೆ ಜಮೀನುಗಳಿಗೆ ತೆರಳ ಬೇಡಿ: ಪಡಗೂರು, ಪರಮಾಪುರ ಸುತ್ತಮುತ್ತಲು ಚಿರತೆ ಮತ್ತು ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಹುಲಿ ಸೆರೆ ಹಿಡಿಯುವವರೆಗೆ ಸ್ಥಳೀಯ ರೈತರು ರಾತ್ರಿ ವೇಳೆ ಜಮೀನುಗಳಿಗೆ ಹೋಗಬಾರದು. ಜೊತೆಗೆ ನಿರ್ಜನ ಪ್ರದೇಶದಲ್ಲಿ ಸಂಚಾರ ಮಾಡಬಾರದು ಎಂದು ವಲಯ ಅರಣ್ಯಾಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.