ಮಹದೆಶ್ವರ ಬೆಟ್ಟ: ಪ್ರಸಿದ್ಧ ಪುಣ್ಯಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಸಹಸ್ರಾರು ಭಕ್ತರು ಮಾದಪ್ಪನ ದರ್ಶನ ಪಡೆದು ಹರಕೆ ಪೂಜೆ ಸಲ್ಲಿಸಿದರು.
ಕರ್ನಾಟಕ ಮಾತ್ರವಲ್ಲದೇ ನೆರೆ ರಾಜ್ಯವಾದ ತಮಿಳುನಾಡಿನಿಂದಲೂ ಗುರುವಾರ ರಾತ್ರಿಯಿಂದಲೇ ಮಾದಪ್ಪನ ಸನ್ನಿಧಿಗೆ ಬಂದರು. ಶುಕ್ರವಾರ ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಮಹದೇಶ್ವರ ಸ್ವಾಮಿ ದರ್ಶನ ಪಡೆದು, ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನ, ಬೆಳ್ಳಿ ತೇರಿಗೆ ಪೂಜೆ ಸಲ್ಲಿಸಿ ದೇವಾಲಯ ಸುತ್ತ ಎಳೆದು ಪೂಜೆ ಸಲ್ಲಿಸಿದರು. ಅಲ್ಲದೆ ಧೂಪ, ಕರ್ಪೂರ ಹಚ್ಚಿದರು. ಸಂಜೆ ಚಿನ್ನದ ತೇರನ್ನು ಎಳೆದು ಪೂಜೆ ಸಲ್ಲಿಸಿದ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸೇವೆ ಸಲ್ಲಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ಅನುಕೂಲಕ್ಕಾಗಿ ಧರ್ಮದರ್ಶನವಲ್ಲದೇ ವಿಶೇಷ ದರ್ಶನದ (₹500, ₹200, ₹100) ಸರದಿ ಸಾಲುಗಳನ್ನು ತೆರೆಯಲಾಗಿತ್ತು. ಅಲ್ಲದೆ ಪ್ರಾಧಿಕಾರದಿಂದ ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಕುಡಿಯುವ ನೀರು, ದಾಸೋಹ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.