ADVERTISEMENT

ರಹಸ್ಯ ಕಾರ್ಯಸೂಚಿಯನ್ನು ಬಿಜೆಪಿಯವರು ಸಂಸದರ ಬಾಯಿಂದ ಹೇಳಿಸುತ್ತಿದ್ದಾರೆ: ಸಿ.ಎಂ

ಸಂವಿಧಾನ ಬದಲಿಸುವ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಸಿ.ಎಂ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 9:49 IST
Last Updated 12 ಮಾರ್ಚ್ 2024, 9:49 IST
<div class="paragraphs"><p>ಹೆಗ್ಗವಾಡಿಯಲ್ಲಿ ಮಾಜಿ ಸಂಸದ ಆರ್ ಧ್ರುವನಾರಾಯಣ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ&nbsp;ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಹೆಗ್ಗವಾಡಿಯಲ್ಲಿ ಮಾಜಿ ಸಂಸದ ಆರ್ ಧ್ರುವನಾರಾಯಣ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

   

ಚಾಮರಾಜನಗರ: ‘ಮನುವಾದ, ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಬಿಜೆಪಿಯವರು ಸಂವಿಧಾನ ಬದಲಿಸುವ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಅನಂತಕುಮಾರ್ ಹೆಗಡೆಯವರ ಬಾಯಿಂದ ಹೇಳಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಟೀಕಿಸಿದರು.

ತಾಲ್ಲೂಕಿನ ಹೆಗ್ಗವಾಡಿಯಲ್ಲಿ ಮಾಜಿ ಸಂಸದ ಆರ್ ಧ್ರುವನಾರಾಯಣ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ನಂತರ, ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಅನಂತ್ ಕುಮಾರ್ ಹೆಗಡೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಐದು ಬಾರಿ ಸಂಸದರಾದವರು. ಈ ಹಿಂದೆಯೂ, ‘ನಾವು ಅಧಿಕಾರಕ್ಕೇ ಬಂದಿದ್ದೇ ಸಂವಿಧಾನ ಬದಲಿಸಲು’ ಎಂದು ಹೇಳಿಕೆ ನೀಡಿದ್ದರು. ಅವರ ವಿರುದ್ದ ಬಿಜೆಪಿಯವರು ಯಾಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

ಸಿಎಎಗೆ ವಿರೋಧ: ಸಿಎಎ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಎಂ, ‘ಚುನಾವಣೆಗಾಗಿ ಜಾರಿಗೆ ತಂದಿದ್ದಾರೆ. ಇಲ್ಲದಿದ್ದರೆ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಧರ್ಮಾಧಾರಿತ ಪೌರತ್ವ ನೀಡುವುದು ಸರಿಯಲ್ಲ, ಹೀಗಾಗಿ ನಾವು ಸಿಎಎ ವಿರೋಧಿಸುತ್ತೇವೆ’ ಎಂದರು.

‘ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ’ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ‘ತಮಿಳುನಾಡಿಗೆ ನೀರು ಬಿಡುತ್ತಿರುವ ವಿಷಯ ಶುದ್ಧ ಸುಳ್ಳು, ನಮಗೇ ನೀರಿಲ್ಲದಿರುವಾಗ, ತಮಿಳುನಾಡಿಗೆ ಒಂದು ತೊಟ್ಟು ನೀರು ಬಿಡಲು ಸಾಧ್ಯವೇ ಇಲ್ಲ, ನಮ್ಮ ನಾಡಿನ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಜವಾಬ್ದಾರಿ’ ಎಂದರು.

ಬಿಜೆಪಿ ಸೋಲಿಸುವುದೇ ಗುರಿ: ಮೈಸೂರು ಬಿಜೆಪಿ ಟಿಕೆಟ್ ಕುರಿತ ಪ್ರಶ್ನೆಗೆ, ‘ಪ್ರತಾಪ ಸಿಂಹ ಹೆಸರು ಕೆಡಿಸಿಕೊಂಡಿದ್ದು, ಅವರು ಗೆಲ್ಲುವುದಿಲ್ಲ ಎಂಬ ಕಾರಣಕ್ಕೆ ಯದುವೀರ್ ಅವರನ್ನು ಅಭ್ಯರ್ಥಿ ಮಾಡುವ ನಿರ್ಧಾರಕ್ಕೆ ಬಂದಿರಬಹುದು, ಆದರೆ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದಕ್ಕಿಂತ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.