ADVERTISEMENT

ಚಾಮರಾಜನಗರ: ಪುಟ್ಟ ವಾರ್ಡ್‌ನಲ್ಲಿ ಕಸದ್ದೇ ಸಮಸ್ಯೆ

21ನೇ ವಾರ್ಡ್‌ನಲ್ಲಿ ಸ್ವಚ್ಛತೆ ಮಾಯ, ಕಸ ಸಂಗ್ರಹ ವ್ಯವಸ್ಥೆ ಅಸಮರ್ಪಕ

ಸೂರ್ಯನಾರಾಯಣ ವಿ.
Published 14 ಸೆಪ್ಟೆಂಬರ್ 2023, 7:27 IST
Last Updated 14 ಸೆಪ್ಟೆಂಬರ್ 2023, 7:27 IST
ಚಾಮರಾಜನಗರದ 21ನೇ ವಾರ್ಡ್‌ನಲ್ಲಿ ಚರಂಡಿಯಿಂದ ಮೇಲೆತ್ತಿರುವ ಕಸವನ್ನು ರಸ್ತೆ ಬದಿಯಲ್ಲಿ ಬಿಟ್ಟಿರುವುದು
ಚಾಮರಾಜನಗರದ 21ನೇ ವಾರ್ಡ್‌ನಲ್ಲಿ ಚರಂಡಿಯಿಂದ ಮೇಲೆತ್ತಿರುವ ಕಸವನ್ನು ರಸ್ತೆ ಬದಿಯಲ್ಲಿ ಬಿಟ್ಟಿರುವುದು   

ಚಾಮರಾಜನಗರ: ಜಿಲ್ಲಾ ಕೇಂದ್ರದ ಹೃದಯಭಾಗದಲ್ಲಿರುವ 21ನೇ ವಾರ್ಡ್‌ ವಿಸ್ತೀರ್ಣದಲ್ಲಿ ಚಿಕ್ಕದು. ಹೆಚ್ಚು ಅಭಿವೃದ್ಧಿಯಾಗಿಲ್ಲ. ರಸ್ತೆ, ನೀರು, ಬೀದಿ ದೀಪದ ಸೌಲಭ್ಯಗಳಿವೆ. ಅನೈರ್ಮಲ್ಯ ಇಲ್ಲಿನ ಬಹುದೊಡ್ಡ ಸಮಸ್ಯೆ.

900ರಷ್ಟು ಕುಟುಂಬಗಳು ವಾಸವಿರುವ ವಾರ್ಡ್‌ನಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚು. ಡೀವಿಯೇಷನ್‌ ರಸ್ತೆ, ಚಿಕ್ಕಂಗಡಿ ಬೀದಿಯ ಸ್ವಲ್ಪ ಭಾಗ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ.

ಈ ವಾರ್ಡ್‌ನಲ್ಲಿ 1400ದಷ್ಟು ಮತದಾರರಿದ್ದಾರೆ. ಜನಸಂಖ್ಯೆ 2,500ರಷ್ಟು ಇದೆ. ಬಣಜಿಗರು, ಕುಂಬಾರರು, ಸವಿತಾ ಸಮಾಜ, ಬೆಸ್ತರು ಸೇರಿದಂತೆ ವಿವಿಧ ಜನಾಂಗದವರು ಇಲ್ಲಿ ವಾಸವಿದ್ದಾರೆ.    

ADVERTISEMENT

ತುಂಬಾ ಇಕ್ಕಟ್ಟಾಗಿರುವ ಈ ವಾರ್ಡ್‌ನಲ್ಲಿ ದೊಡ್ಡ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣಿಸುತ್ತಿಲ್ಲ. ರಸ್ತೆಗಳು ತುಂಬಾ ಕಿರಿದಾಗಿವೆ. ಪುಟ್ಟ ಪುಟ್ಟ ಮನೆಗಳೇ ಹೆಚ್ಚಾಗಿವೆ. ಚಿಕ್ಕ ಮನೆಯಲ್ಲೇ ಹೆಚ್ಚು ಜನರು ವಾಸವಿದ್ದಾರೆ. 

ಕಿರಿದಾಗಿರುವ ರಸ್ತೆಗಳು ಕಾಂಕ್ರೀಟ್‌, ಡಾಂಬರು ಕಂಡಿವೆ. ಕೆಲವು ಕಡೆ ಗಲ್ಲಿಗಳಲ್ಲಿ ರಸ್ತೆ ಕಾಲುದಾರಿಯಷ್ಟೇ ಅಗಲವಿದೆ. ಕಾವೇರಿ ನೀರು ನಿಯಮಿತವಾಗಿ ಬಾರದಿದ್ದರೂ, ಕೊಳವೆ ಬಾವಿ ಇರುವುದರಿಂದ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿಲ್ಲ. ವಾರ್ಡ್‌ ನಗರದ ಹೃದಯಭಾಗದಲ್ಲಿರುವುದರಿಂದ ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿದೆ. 

ಅನೈರ್ಮಲ್ಯವೇ ಸಮಸ್ಯೆ: ಆದರೆ, ಇಲ್ಲಿ ಸ್ವಚ್ಛತೆ ಇಲ್ಲ. ಒಳಚರಂಡಿ ವ್ಯವಸ್ಥೆ ಇದ್ದರೂ, ಎಲ್ಲ ಮನೆಗಳ ಶೌಚಾಲಯ, ಸ್ನಾನ ಗೃಹಗಳ ಸಂಪರ್ಕವನ್ನು ಒಳಚರಂಡಿಗೆ ಕೊಟ್ಟಿಲ್ಲ. ಹಾಗಾಗಿ, ಮನೆಗಳಲ್ಲಿ ಉತ್ಪತ್ತಿಯಾಗುವ ಎಲ್ಲ ತ್ಯಾಜ್ಯಗಳು ತೆರೆದ ಚರಂಡಿಯನ್ನು ಸೇರುತ್ತವೆ.

‘ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಿಯಮಿತವಾಗಿ ಆಗುವುದಿಲ್ಲ. ನಗರಸಭೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಿಬ್ಬಂದಿಯನ್ನು ಕರೆಸಿದರೆ, ಅವರು ಬಂದು ಚರಂಡಿಯನ್ನು ಸ್ವಚ್ಛಗೊಳಿಸಿ, ಕಲ್ಮಶ ಹೂಳನ್ನು ರಸ್ತೆಯ ಮೇಲೆ ಹಾಕಿ ಹೋಗುತ್ತಾರೆ. ಮತ್ತೆ ಅದನ್ನು ತೆರವುಗೊಳಿಸುವುದಿಲ್ಲ. ಇದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಮಕ್ಕಳು ಸೇರಿದಂತೆ ಜನರಿಗೆ ಓಡಾಡುವುದಕ್ಕೆ ಕಿರಿಕಿರಿಯಾಗುತ್ತದೆ’ ಎಂಬುದು ನಿವಾಸಿಗಳ ದೂರು. 

‘ಸವಿತಾ ಸಮಾಜದವರು ವಾಸವಿರುವ ಬೀದಿ ತುಂಬಾ ಕಿರಿದಾಗಿದ್ದು, ಕಸದ ಗಾಡಿ ಬರುವುದಿಲ್ಲ. ಅಲ್ಲಿನ ಮನೆಗಳಿಂದ ಕಸ ಸಂಗ್ರಹ ಸಮರ್ಪಕವಾಗಿ ಆಗುವುದಿಲ್ಲ’ ಎಂಬುದು ಅವರ ಅಳಲು.  

‘ನಮ್ಮ ಬಡಾವಣೆಯಲ್ಲಿ ರಸ್ತೆ, ನೀರಿನ ವ್ಯವಸ್ಥೆ ತಕ್ಕ ಮಟ್ಟಿಗೆ ಇದೆ. ಆದರೆ, ಕಸದ ಸಮಸ್ಯೆಯೇ ಹೆಚ್ಚು. ಕಸ ಸಂಗ್ರಹ ಸರಿಯಾಗಿ ಆಗುತ್ತಿಲ್ಲ. ಚರಂಡಿಯ ಹೂಳೆತ್ತಿದ್ದರೆ, ಅದನ್ನು ನಗರಸಭೆಯವರು ತಕ್ಷಣ ತೆಗೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ವಾತಾವರಣ ಅನೈರ್ಮಲ್ಯವಾಗುತ್ತಿದೆ. ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಯಾರೂ ಈ ಬಗ್ಗೆ ಗಮನ ಹರಿಸುವುದಿಲ್ಲ’ ಎಂದು ವಾರ್ಡ್‌ ನಿವಾಸಿ ಮಂಗಳಮ್ಮ ‘ಪ್ರಜಾವಾಣಿ’ಗೆ ದೂರಿದರು. 

ವಾರ್ಡ್‌ನ ಕಿರಿದಾದ ರಸ್ತೆಯೊಂದರ ನೋಟ
ಸುದರ್ಶನ ಗೌಡ
ಬಹುತೇಕ ನಿವಾಸಿಗಳು ಶೌಚಾಲಯಗಳ ಸಂಪರ್ಕವನ್ನು ಒಳಚರಂಡಿಗೆ ಕಲ್ಪಿಸಿದ್ದಾರೆ. ಇನ್ನೂ ಕೆಲವರು ಕಲ್ಪಿಸಬೇಕಿದೆ. ಸ್ವಚ್ಛತೆ ಕಾಪಾಡಲು ಜನರ ಸಹಕಾರವೂ ಮುಖ್ಯ
ಸುದರ್ಶನ ಗೌಡ ವಾರ್ಡ್‌ ಸದಸ್ಯ
‘ಸೌಲಭ್ಯ ಕಲ್ಪಿಸಲು ಕ್ರಮ’
21ನೇ ವಾರ್ಡ್‌ನಲ್ಲಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್‌ ಸದಸ್ಯ ಸುದರ್ಶನ ಗೌಡ ‘ಇತ್ತೀಚಿನ ಕೆಲವು ದಿನಗಳಲ್ಲಿ ಕಸ ಸಂಗ್ರಹದಲ್ಲಿ ಸಮಸ್ಯೆಯಾಗಿರುವುದು ನಿಜ. ನಗರಸಭೆಯ ಕಸದ ವಾಹನಗಳು ಹಾಳಾಗಿದ್ದರಿಂದ ಮನೆ ಮನೆಗೆ ಹೋಗಿ ಸಂಗ್ರಹಿಸುವುದಕ್ಕೆ ಆಗಿಲ್ಲ. ಈಗ ವಾಹನಗಳು ಸರಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ಸಮರ್ಪಕವಾಗಿ ಕಸ ವಿಲೇವಾರಿಗೆ ಸೂಚಿಸಲಾಗುವುದು’ ಎಂದರು.  ‘ಹಸಿ ಕಸ ಒಣ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ನೀಡುವಂತೆ ವಾರ್ಡ್‌ನ ನಿವಾಸಿಗಳಿಗೆ ಸೂಚಿಸಲಾಗಿದೆ. ಹಾಗಿದ್ದರೂ ಹಲವರು ಇದನ್ನು ಪಾಲನೆ ಮಾಡುತ್ತಿಲ್ಲ. ಕೆಲವರು ಇನ್ನೂ ಒಳ ಚರಂಡಿಗೆ ಮನೆಯ ಸಂಪರ್ಕ ಕಲ್ಪಿಸಿಲ್ಲ. ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.  ‘ನಗರೋತ್ಥಾನ ಯೋಜನೆ ಅಡಿಯಲ್ಲಿ ವಾರ್ಡ್‌ಗೆ ಹಂಚಿಕೆಯಾಗಲಿರುವ ಹಣದಲ್ಲಿ ತೆರೆದ ಚರಂಡಿಗಳಿಗೆ ಮುಚ್ಚಿಗೆ ಹಾಕಲು ಯೋಜನೆ ರೂಪಿಸಲಾಗಿದೆ’ ಎಂದು ಸುದರ್ಶನ ಗೌಡ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.