ಚಾಮರಾಜನಗರ: ಶಿವರಾತ್ರಿ ಜಾತ್ರೆ ಬಳಿಕ ಜಿಲ್ಲೆಯಾದ್ಯಂತ ಆರಂಭಗೊಂಡಿರುವ ಜಾತ್ರೆ, ಉತ್ಸವಗಳಿಂದಾಗಿ ಮಾರುಕಟ್ಟೆಯಲ್ಲಿ ಹೂವುಗಳಿಗೆ ಸಿಕ್ಕಾಪಟ್ಟೆ ಬೇೆಡಿಕೆ ಕಂಡು ಬಂದಿದೆ.
ನಾಲ್ಕು ವಾರಗಳಿಂದ ನಗರದ ಚೆನ್ನಿಪುರಮೋಳೆಯ ಹೂವಿನ ಮಾರುಕಟ್ಟೆಯಲ್ಲಿ ಎಲ್ಲ ಹೂವುಗಳಿಗೂ ಬೇಡಿಕೆ ಹೆಚ್ಚಿದ್ದು, ಬೆಲೆಯೂ ಜಾಸ್ತಿ ಇದೆ.
ಕನಕಾಂಬರ ಕೆಜಿಗೆ ₹800 ಇದೆ. ಮೂರು ವಾರಗಳಿಂದ ಇದೇ ಧಾರಣೆ ಇದೆ. ಮಲ್ಲಿಗೆಗೂ ಬೇಡಿಕೆ ಹೆಚ್ಚಾಗಿದ್ದು, ಕೆಜಿಗೆ ₹600 ಇದೆ. ಕಾಕಡ ಸೀಸನ್ ಮುಕ್ತಾಯವಾಗುತ್ತಿರುವುದರಿಂದ ಹೂವು ಬರುತ್ತಿಲ್ಲ. ಹೀಗಾಗಿ ಬೆಲೆ ಹೆಚ್ಚಾಗಿದೆ. ವ್ಯಾಪಾರಿಗಳು ಕೆಜಿಗೆ ₹1,000 ಹೇಳುತ್ತಿದ್ದಾರೆ.
ಸೇವಂತಿಗೆಗೂ ಬೇಡಿಕೆ ಇದ್ದು, ಕೆಜಿಗೆ ₹250ರಿಂದ ₹300ರವರೆಗೆ ಇದೆ. ಚೆಂಡು ಹೂವಿಗೆ ₹50ರಿಂದ ₹60 ಇದೆ. ಸುಗಂಧರಾಜಕ್ಕೆ ₹160ರಿಂದ ₹200 ಇದೆ.
‘ಬಟನ್ ಗುಲಾಬಿ ಬಿಟ್ಟು ಉಳಿದೆಲ್ಲ ಹೂವುಗಳಿಗೆ ಬೇಡಿಕೆ ಇದೆ. ಹಬ್ಬ, ಉತ್ಸವಗಳು ಇರುವುದರಿಂದ ಗ್ರಾಹಕರು ಹೂವುಗಳನ್ನು ಖರೀದಿಸುತ್ತಿದ್ದಾರೆ. ಯುಗಾದಿವರೆಗೂ ಇದೇ ರೀತಿ ಇರಲಿದೆ. ಬೆಲೆಯೂ ಹೆಚ್ಚಿರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬೀನ್ಸ್ ದುಬಾರಿ: ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಧಾರಣೆ ಈ ವಾರ ಜಾಸ್ತಿಯಾಗಿದೆ. ಟೊಮೆಟೊ ಧಾರಣೆಯಲ್ಲೂ ಕೊಂಚ ಏರಿಕೆ ಕಂಡು ಬಂದಿದೆ.
ಹಾಪ್ಕಾಮ್ಸ್ನಲ್ಲಿ ಕೆಜಿ ಬೀನ್ಸ್ಗೆ ₹80 ಇದೆ. ಹೋದ ವಾರ ಕೆಜಿಗೆ ₹60 ಇತ್ತು. ಟೊಮೆಟೊ ಬೆಲೆಯಲ್ಲೂ ₹10 ಏರಿಕೆಯಾಗಿದೆ. ಹೋದ ವಾರ ಕೆಜಿಗೆ ₹10 ಇತ್ತು. ಮೂಲಂಗಿ ಬೆಲೆಯೂ ₹10 ಜಾಸ್ತಿಯಾಗಿ ₹40ಕ್ಕೆ ತಲುಪಿದೆ.
ಉಳಿದಂತೆ ಕ್ಯಾರೆಟ್, ಶುಂಠಿ, ಬದನೆಕಾಯಿ, ಈರುಳ್ಳಿ ಸೇರಿದಂತೆ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
‘ಬೀನ್ಸ್ ಆವಕ ಕಡಿಮೆಯಾಗಿದೆ. ಟೊಮೆಟೊಗೂ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಸ್ವಲ್ಪ ಏರಿಕೆಯಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಹೇಳಿದರು.
ದಾಳಿಂಬೆ ಕೊಂಚ ಅಗ್ಗ
ಕಳೆದ ವಾರದವರೆಗೂ ಕೆಜಿಗೆ ₹180 ಇದ್ದ ದಾಳಿಂಬೆ ಬೆಲೆ ಈವಾರ ₹40ರಷ್ಟು ಇಳಿದಿದೆ. ಹಾಪ್ಕಾಮ್ಸ್ನಲ್ಲಿ ₹140ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ಸೇಬಿನ ದುಬಾರಿ ದರ (₹180) ಈ ವಾರವೂ ಮುಂದುವರಿದಿದೆ. ಕಿತ್ತಳೆ ಪೂರೈಕೆ ಕಡಿಮೆಯಾಗುತ್ತಿದ್ದು ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹಾಪ್ಕಾಮ್ಸ್ನಲ್ಲಿ ಕಿತ್ತಳೆ ಬೆಲೆ ಕೆಜಿಗೆ ₹100 ಇದೆ. ಕಳೆದ ವಾರದವರೆಗೂ ₹80 ಇತ್ತು. ಸೀಡ್ಲೆಸ್ ಹಸಿರು ದ್ರಾಕ್ಷಿ ಮಾತ್ರ ಸದ್ಯ ಲಭ್ಯವಿದ್ದು ಕೆಜಿಗೆ ₹80 ಇದೆ. ಉಳಿದಂತೆ ಮೂಸಂಬಿ ಸಪೋಟಾ ಏಲಕ್ಕಿ ಬಾಳೆ ಹಣ್ಣು ಸೇರಿದಂತೆ ಇತರ ಹಣ್ಣುಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.