ಯಳಂದೂರು: ಪಶ್ಚಿಮ ಘಟ್ಟದ ಕೃಷಿಕರ ಬೇಸಾಯದ ಭಾಗವಾಗಿದ್ದ ಸ್ಥಳೀಯ ಗೋವುಗಳು ಅಳಿವಿನಂಚಿನಲ್ಲಿ ಇವೆ. ಅವುಗಳಲ್ಲಿ ಮಲೆನಾಡು ಗಿಡ್ಡಗಳಿಗೆ ಮೊದಲ ಸ್ಥಾನ ನೀಡಲಾಗಿದೆ. ಇಂತಹ ಅಪರೂಪದ ತಳಿ ಬಯಲು ಸೀಮೆಯಲ್ಲೂ ಜನಪ್ರಿಯವಾಗುತ್ತಿದೆ.
ಔಷಧೀಯ ಗುಣಗಳ ಹಾಲು, ಗಂಜಳ ಮತ್ತು ಸಗಣಿಗಾಗಿ ಮಲೆನಾಡು ಗಿಡ್ಡಗಳ ಸಾಕಣೆಗೆ ಒಲವು ತೋರುತ್ತಿದ್ದಾರೆ.
ತಾಲ್ಲೂಕಿನಲ್ಲಿ ನಾಟಿ ಹಸುಗಳ ಸಂಕುಲ ಬಹುತೇಕ ನಶಿಸಿದೆ. ವಿದೇಶಿ ಜಾತಿಯ ಜರ್ಸಿ ಅವುಗಳ ಸ್ಥಾನ ಅಲಂಕರಿಸಿದೆ. ಇವು ಹೆಚ್ಚು ಆರ್ಥಿಕ ಮೌಲ್ಯ ಹೊಂದಿದ್ದು, ಹೆಚ್ಚಿನ ಸಾಕಣೆ ಖರ್ಚು, ರೋಗಗಳ ಹಾವಳಿಗೂ ಈಡಾಗುತ್ತಿವೆ. ಆದರೆ, ಮಲೆನಾಡು ಭಾಗದ ದೇಸೀ ರಾಸುಗಳು ಎಲ್ಲ ಪರಿಸರಕ್ಕೂ ಹೊಂದಿಕೊಂಡು ಬೆಳೆಯುತ್ತವೆ. ಇವುಗಳ ಪಾಲನೆ ಮತ್ತು ಪೋಷಣೆ ಸುಲಭ.
‘ಗಿಡ್ಡ ರಾಸುಗಳ ದೇಹ ಚಿಕ್ಕದು. ಬಲವಾದ ಗೊರಸು ಮತ್ತು ಚಂಗನೆ ನೆಗೆಯುವ ಸಾಮರ್ಥ್ಯ ಹೊಂದಿದ್ದು, ಕೃಷಿ ಚಟುವಟಿಕೆಗೂ ಬಳಸಬಹುದು. ಕಡಿಮೆ ಆಹಾರ ಮತ್ತು ನೀರು ಬಳಸಿಕೊಂಡು, ದೀರ್ಘಾವಧಿ ಬದುಕುತ್ತವೆ. ಕೃಷಿ ಭೂಮಿಯಲ್ಲಿ ಸಿಗುವ ಚಿಗುರು, ಹಸಿ ಹುಲ್ಲು ಸೇವಿಸಿ, ಉತ್ಕೃಷ್ಟ ದರ್ಜೆಯ ಸಗಣಿ ವಿಸರ್ಜಿಸುತ್ತದೆ. ಸದಾ ದೇಹಕ್ಕೆ ಕೊಳೆ ಸೋಂಕದಂತೆ ಎಚ್ಚರ ವಹಿಸುವ ಇವುಗಳನ್ನು ತಿಂಗಳಿಗೆ ಒಂದೆರಡು ಬಾರಿ ಸ್ವಚ್ಛಗೊಳಿಸಿದರೆ ಸಾಕು. ₹10 ಸಾವಿರದಲ್ಲಿ ಕೊಳ್ಳಬಹುದು’ ಎಂದು ಕಂದಹಳ್ಳಿ ಗ್ರಾಮದ ಸಾಕಣೆದಾರ ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ವೇದಗಳಲ್ಲಿ ವರ್ಣನೆ: ಭೌಗೋಳಿಕವಾಗಿ ಈ ಜಾತಿಯ ಗಿಡ್ಡ ಕಾಡು ಮೇಡು, ಬೆಟ್ಟಗುಡ್ಡ ಏರಿಳಿಯುವ ಸಾಮರ್ಥ್ಯ ಹೊಂದಿವೆ. ಇವುಗಳಿಗೆ ರೋಗ ರುಜಿನ ಬಂದರೆ ಬಹುಬೇಗ ಗುಣವಾಗುತ್ತದೆ. ದೇಹದ ಮೇಲೆ ಸೂರ್ಯಕೇತು ನಾಡಿ ಇದ್ದು. ಬಿಸಿಲಿನ ಸ್ವರ್ಣಕ್ಷಾರವನ್ನು ಹೀರಿಕೊಂಡು ಗುಣಮಟ್ಟದ ಕ್ಷೀರ ನೀಡುತ್ತವೆ. ನೈಸರ್ಗಿಕವಾಗಿ ಸಿಗುವ ಕ್ಷಾರ ಗುಣವನ್ನು ಗಂಜಳದ ರೂಪದಲ್ಲಿ ಹೊರಹಾಕುತ್ತದೆ. ಇದನ್ನು ಬಳಸಿಕೊಂಡು ಜೀವಾಮೃತ ತಯಾರಿಸಿ ಭೂಮಿಗೆ ನೀಡಿದಲ್ಲಿ, ಎರೆಹುಳು ಸಮೃದ್ಧವಾಗಿ ಸಾಗುವಳಿ ಸುಲಭವಾಗುತ್ತದೆ ಎಂಬುದನ್ನು ವೇದಗಳಲ್ಲಿ ವರ್ಣಿಸಲಾಗಿದೆ.
ಗಿಡ್ಡದ ಲಕ್ಷಣ: ‘ಮಲೆನಾಡು ಗಿಡ್ಡಗಳು ಕಪ್ಪು, ಕಂದು, ಬಿಳಿ ಬಣ್ಣದಲ್ಲಿ ಮಾತ್ರ ಇವೆ. ಕೊರಳಲ್ಲಿ ಮಾಲೆ (ಗಂಗೆ ತೊಗಲು), ಉದ್ದಬಾಲ ಹಾಗೂ ಉಬ್ಬಿದ ಹೆಗಲು ಹೊಂದಿದ್ದು, ವರ್ಷಕ್ಕೆ 1 ಕರುವನ್ನು ಹಾಕುತ್ತದೆ. 20 ರಿಂದ 25 ವರ್ಷ ಬದುಕುತ್ತದೆ ಎಂತಲೆ ಇವಕ್ಕೆ ‘ವರ್ಷಗಂಧಿ’ ಎಂಬ ಹೆಸರು ಬಂದಿದೆ. ಸದಾ ತುಂಟಾಟ ಮತ್ತು ವೇಗ ಸಂಚಾರ ಸಾಮರ್ಥ್ಯದ ಇವುಗಳನ್ನು ಸುಲಭವಾಗಿ ನಿರ್ವಹಿಸಬಹುದು’ ಎನ್ನುತ್ತಾರೆ ಹೊನ್ನೂರು ಕೃಷಿಕ ಪ್ರಸನ್ನ.
ಮಲೆನಾಡು ಭಾಗದ ತಳಿ ಗುಣಮಟ್ಟದ ಹಾಲಿಗೆ ಹೆಸರುವಾಸಿ ರೋಗ ನಿರೋಧಕ ಶಕ್ತಿ ಹೆಚ್ಚು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.