ನಾ.ಮಂಜುನಾಥಸ್ವಾಮಿ
ಯಳಂದೂರು: ವ್ಯಕ್ತಿ ಅಥವಾ ವಿದ್ಯಾರ್ಥಿ ಪುಸ್ತಕ ಹಿಡಿದರೆ ಜಗತ್ತು ಅವನ ಸುತ್ತ ತಿರುಗುತ್ತದೆ ಎಂಬುದನ್ನು ಹಲವು ಸಾಧಕರು ಸಾಬೀತು ಪಡಿಸಿದ್ದಾರೆ. ಗ್ರಾಮೀಣ ಮಟ್ಟದಲ್ಲೇ ಜನರಿಗೆ ಗ್ರಂಥಾಲಯ ಸೌಲಭ್ಯ ಸಿಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲೇ ಗ್ರಂಥಾಲಯಗಳಿಗೆ ಹೊಸ ರೂಪ ನೀಡುತ್ತಿದೆ.
ಜಿಲ್ಲಾ ಪಂಚಾಯಿತಿಯ ಮೇಲುಸ್ತುವಾರಿಯಲ್ಲಿ ತಾಲ್ಲೂಕಿನ 12 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲೂ ಗ್ರಂಥ ಭಂಡಾರಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಮಾಂಬಳ್ಳಿ ಗ್ರಾಮದಲ್ಲಿನ ಗ್ರಂಥಾಲಯವು ಡಿಜಿಟಲೀಕರಣಗೊಂಡು ಈಗ ಹೆಚ್ಚು ಮಕ್ಕಳು, ಮಹಿಳೆಯರನ್ನು ತನ್ನತ್ತ ಸೆಳೆಯುತ್ತಿದೆ.
ಪ್ರತಿದಿನ ನೂರಾರು ಓದುಗರು ಹಾಗೂ ಮಕ್ಕಳು ಪತ್ರಿಕೆ, ಪುಸ್ತಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಮಾಹಿತಿ ಸಂಗ್ರಹಿಸಲು ಗ್ರಂಥಾಲಯದತ್ತ ಮುಖ ಮಾಡುತ್ತಿದ್ದಾರೆ.
ಸ್ತ್ರೀಯರು ಓದುಗರು: ‘ಪ್ರತಿದಿನ ಸ್ವ ಸಹಾಯ ಸಂಘದ ಸದಸ್ಯರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಪತ್ರಿಕೆ ಮತ್ತು ಪುಸ್ತಕಗಳನ್ನು ಓದುತ್ತಾರೆ. ರಜಾ ದಿನಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಬಾಲಕಿಯರು ಪಠ್ಯ ಕೇಂದ್ರಿತ ವಿಷಯಗಳನ್ನು ಗೂಗಲ್ನಲ್ಲಿ ಹಡುಕುತ್ತಾರೆ. ಕೆಲವರು ಬರೆದುಕೊಂಡು, ಕಲಿಕೆಗೆ ಬಳಸಿಕೊಳ್ಳುತ್ತಾರೆ. ವಿಜ್ಞಾನ, ಕಲೆ, ಕವಿ, ಕಲಾವಿದ ಮತ್ತು ಪರಿಸರದ ಬಗ್ಗೆ ಅಧ್ಯಯನ ಮಾಡುವವರಿಗೆ ಗ್ರಂಥಾಲಯ ನೆರವಾಗಿದೆ’ ಎಂದು ಗ್ರಂಥಪಾಲಕಿ ಮಂಜುಳ ಹೇಳುತ್ತಾರೆ.
‘ನಮಗೆ ಉತ್ತಮ ವ್ಯಕ್ತಿತ್ವ ಕಟ್ಟಿಕೊಡುವ ನಿಟ್ಟಿನಲ್ಲಿ ಹಾಗೂ ದೇಶದ ನಾಗರಿಕರನ್ನಾಗಿ ರೂಪಿಸುವ ಹಾದಿಯಲ್ಲಿ ಗ್ರಂಥಗಳು, ಕೃತಿಗಳು ಸಹಕಾರಿಯಾಗಿವೆ. ಮಹಾತ್ಮರ ಘೋಷ ವಾಕ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿ ಮತ್ತು ಸಾರ್ವಜನಿಕರನ್ನು ಪುಸ್ತಕಗಳನ್ನು ಓದಲು ಪ್ರೇರೇಪಿಸುವ ಕೆಲಸವೂ ನಡೆದಿದೆ’ ಎಂದು ಅವರು ಹೇಳಿದರು.
‘ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳಿಗೆ ಓದುವ ಹವ್ಯಾಸ ಬೆಳಸಬೇಕು. ಸಮಯದ ಸದ್ಭಳಕೆ ಮಾಡಿಕೊಂಡು, ಕಲಿಕೆ ಜೊತೆ ನಮ್ಮ ಸಂಸ್ಕೃತಿ, ವೈಚಾರಿಕತೆ ತಿಳಿಸಬೇಕು. ದಿನ ಪತ್ರಿಕೆಗಳ ಮಹತ್ವ ಮನಗಾಣಿಸಬೇಕು. ಕನ್ನಡ ಭಾಷೆ ಮತ್ತು ನುಡಿಯನ್ನು ಸ್ಪಷ್ಟವಾಗಿ ಬಳಸಲು ಕಂಪ್ಯೂಟರ್ ಆಧಾರಿತ ಧ್ವನಿ ಗ್ರಹಣ ವ್ಯವಸ್ಥೆಯೂ ಈ ಗ್ರಂಥಾಲಯದಲ್ಲಿದೆ’ ಎಂದು ಸ್ತ್ರೀ ಶಕ್ತಿ ಸಂಘದ ಸದಸ್ಯೆ ಸೌಭಾಗ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.