ಗುಂಡ್ಲುಪೇಟೆ: ಸೂಕ್ತ ದಾಖಲೆಗಳು ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 37 ಲಕ್ಷ ನಗದನ್ನು ತಾಲ್ಲೂಕಿನ ಗಡಿ ಭಾಗದ ಮದ್ದೂರು ಚೆಕ್ ಪೋಸ್ಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಚೆಕ್ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗುಂಡ್ಲುಪೇಟೆ ಕಡೆಯಿಂದ ಬಂದ ಕಾರನ್ನು ತಡೆದು ತಪಾಸಣೆಗೊಳಪಡಿಸಿದಾಗ ಕಾರಿನಲ್ಲಿದ್ದ ಲೆದರ್ಬ್ಯಾಗ್ನಲ್ಲಿ ₹ 20 ಲಕ್ಷ ಪತ್ತೆಯಾಗಿದೆ. ಬಳಿಕ ಅನುಮಾನಗೊಂಡ ಪೊಲೀಸರು ಕಾರನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಿಂಬದಿ ಸೀಟಿನಲ್ಲಿಟ್ಟಿದ್ದ ಬ್ಯಾಗಿನಲ್ಲೂ ₹ 17 ಲಕ್ಷ ದೊರೆತಿದೆ.
ಕೇರಳ ಮೂಲದ ಹೊಟೇಲ್ ಉದ್ಯಮಿಗಳಾದ ಪಿ.ಆರ್.ರಾಹುಲ್ ಹಾಗೂ ಸಿ.ಕೆ.ತಾಲ್ವಿನ್ ಅವರ ಕಾರಿನಲ್ಲಿ ಹಣ ದೊರೆತಿದ್ದು ಯಾವುದೇ ದಾಖಲೆಗಳನ್ನು ಹಾಜರುಪಡಿಸದ ಪರಿಣಾಮ ನಗದು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪಾಸಣೆ ವೇಳೆ ಪಿಎಸ್ಐ ಸಾಹೇಬಗೌಡ, ಸಿಬ್ಬಂದಿಗಳಾದ ಬಂಟಪ್ಪ, ಪ್ರಭು ಬೊಮ್ಮನಹಳ್ಳಿ ಸತೀಶ್ ಪಾರಿಗೊಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.