ಕೊಳ್ಳೇಗಾಲ: ತಾಲ್ಲೂಕಿನ ಹಳೇ ಹಂಪಾಪುರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಸುನೀತಾ ( 31) ಆತ್ಮಹತ್ಯೆ ಮಾಡಿಕೊಂಡವರು.
2018ರಲ್ಲಿ ಕುಣಗಳ್ಳಿಯ ಸುನೀತಾ ಅವರ ವಿವಾಹವು ಹಂಪಾಪುರದ ಇಂದ್ರ ಕುಮಾರ್ ಜೊತೆ ಆಗಿತ್ತು. ಆರು ವರ್ಷಗಳಿಂದ ಜೀವನ ನಡೆಸುತ್ತಿದ್ದರು. ಆದರೆ, ಇಂದ್ರಕುಮಾರ್ ಪ್ರತಿನಿತ್ಯ ಕುಡಿದು ಬಂದು ಹಿಂಸೆ ನೀಡುತ್ತಿದ್ದಲ್ಲದೆ ಹಲ್ಲೆ ಮಾಡುತ್ತಿದ್ದನು. ತವರು ಮನೆಯಿಂದ ಹಣ ತರಲು ನಿತ್ಯವೂ ಪೀಡಿಸುತ್ತಿದ್ದನು. ಇವರ ಜೊತೆಗೆ ಮಾವ ನಿಂಗರಾಜು ಹಾಗೂ ಅತ್ತೆ ಸುಂದರಮ್ಮ ಅವರು ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ದೂರಿದ್ದಾರೆ.
ಇದರಿಂದ ಬೇಸತ್ತ ಸುನೀತಾ ಜುಲೈ 4ರಂದು ಸಂಜೆ 6 ಗಂಟೆಗೆ ಮನೆಯಲ್ಲಿ ಕೀಟನಾಶಕ ಸೇವಿಸಿದ್ದಾಳೆ. ನಂತರ ಗ್ರಾಮಸ್ಥರು ಕೊಳ್ಳೇಗಾಲದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಅಲ್ಲಿಂದ ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ವೈದ್ಯರು ಪರೀಕ್ಷಿಸಿ ಇವಳು ಬದುಕುಳಿಯುವುದು ಕಷ್ಟ ಹಾಗಾಗಿ ನೀವು ಮನೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದರು.
ಸುನೀತಾಳನ್ನು ಗ್ರಾಮಕ್ಕೆ ತಂದ ಕೆಲವೇ ನಿಮಿಷದಲ್ಲಿ ಮೃತಪಟ್ಟಿದ್ದಾರೆ.
ಸುನೀತಾ ಸಾವಿಗೆ ಆಕೆಯ ಗಂಡ ಇಂದ್ರ ಕುಮಾರ್, ಅತ್ತೆ ಹಾಗೂ ಮಾವ ಅವರೇ ಕಾರಣ ಎಂದು ಮೃತಳ ತಾಯಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪೊಲೀಸರು ಇಂದ್ರಕುಮಾರ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.