ADVERTISEMENT

ಸಾವಿನ ಕುರಿತು ಅನುಮಾನ: ಶವ ಹೊರತೆಗೆದು ಪಂಚನಾಮೆ ಇಂದು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 4:23 IST
Last Updated 22 ಫೆಬ್ರುವರಿ 2024, 4:23 IST

ಯಳಂದೂರು/ಮೈಸೂರು: ಮೈಸೂರಿನ ವೃದ್ಧಾಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದ ಯುವತಿ ಮಮತಾ ಎಂಬುವವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೋಷಕರು ಪೊಲೀಸ್‌ ದೂರು ನೀಡಿರುವುದರಿಂದ, ಜಮೀನಿನಲ್ಲಿ ಹೂತಿರುವ ಅವರ ಶವವನ್ನು ಗುರುವಾರ ಹೊರತೆಗೆದು ಪಂಚನಾಮೆ ನಡೆಯಲಿದೆ. 

‘ಮಮತಾ ಫೆ.15ರಂದು ರಾತ್ರಿ ಶೌಚಾಲಯದಲ್ಲಿ ಪ್ರಜ್ಞೆ ತಪ್ಪಿದ್ದರು. ಅವರನ್ನು ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅವರು ಮೃತಪಟ್ಟಿದ್ದರು. ಕೆ.ಆರ್‌.ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಬೇಕಿತ್ತು. ಆದರೆ, ಘಟನೆಯನ್ನು ಪೋಷಕರು ಪೊಲೀಸರ ಗಮನಕ್ಕೆ ತಂದಿರಲಿಲ್ಲ’ ಎಂದು ಮೈಸೂರಿನ ಹೆಬ್ಬಾಳ ಪೊಲೀಸರು ಹೇಳಿದ್ದಾರೆ. 

‘ಫೆ.19ರಂದು ತಾಯಿ ಸುಮತಿ, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಠಾಣೆಗೆ ಬಂದಿದ್ದರು. ಅದರಂತೆ ಪ್ರಕರಣ ದಾಖಲಿಸಿ ಪಂಚನಾಮೆ ನಡೆಸಲು ಯಳಂದೂರು ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ. ಅನುಮತಿ ಮೇರೆಗೆ ಶವವನ್ನು ಹೊರತೆಗೆದು ಪಂಚನಾಮೆ ನಡೆಸಲಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. 

ADVERTISEMENT

ಇಂದು ಪಂಚನಾಮೆ: ಮೈಸೂರು ಪೊಲೀಸರ ಪತ್ರದ ಆಧಾರದಲ್ಲಿ, ಶವವನ್ನು ಹೊರತೆಗೆದು ಪಂಚನಾಮೆ ನಡೆಸಲು ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಮಹೇಶ್‌ ಅವರು ಮಂಗಳವಾರ ಯಳಂದೂರು ತಹಶೀಲ್ದಾರ್‌ ಅವರಿಗೆ ಪತ್ರ ಬರೆದಿದ್ದು, ಅದರಂತೆ ತಹಶೀಲ್ದಾರ್‌ ಸಿದ್ಧತೆ ನಡೆಸಿದ್ದಾರೆ. 

ಅಂಬಳೆ ಗ್ರಾಮ ಪಂಚಾಯಿತಿಗೆ ಸೇರಿದ ಕಮಲ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಶವ ಹೂಳಲಾಗಿದೆ. ವೈದ್ಯರ ತಂಡ ಹಾಗೂ ಹೆಬ್ಬಾಳ ಪೊಲೀಸರು ಗುರುವಾರ ಶವ ಹೊರತೆಗೆಸಿ ಪಂಚೆನಾಮೆ ನಡೆಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.