ಮಹದೇಶ್ವರ ಬೆಟ್ಟ: ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದಾಡಿ ಬೇಸತ್ತು ಬೆಟ್ಟದ ಹಳೆಯೂರಿನ ನಿವಾಸಿ ಮಾದಯ್ಯ ಮಗನ ನೆರವಿನೊಂದಿಗೆ ತಮ್ಮ ಜಮೀನಿನಲ್ಲೇ ಬಾವಿ ತೋಡಿದ್ದಾರೆ.
ಮಾದಯ್ಯ ಅವರ ಮನೆ ಗುಡ್ಡದಲ್ಲಿದೆ. ಗ್ರಾಮ ಪಂಚಾಯಿತಿಯ ಕೊಳವೆ ಬಾವಿ ಕೆಳಭಾಗದಲ್ಲಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಕುಟುಂಬ ಪ್ರತಿ ದಿನ 500 ಮೀಟರ್ ದೂರದಿಂದ ನೀರು ಕೊಂಡೊಯ್ಯಬೇಕಾಗಿತ್ತು.
ಮನೆವರೆಗೂ ನೀರು ಸೌಕರ್ಯ ಕಲ್ಪಿಸಿ ಎಂದು ಮಹದೇವು ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಯಿಂದ ಸ್ಪಂದನೆ ಸಿಕ್ಕಿರಲಿಲ್ಲ ಎಂದು ಅವರು ದೂರಿದ್ದಾರೆ.
ಇದರಿಂದ ಬೇಸತ್ತ ತಮ್ಮ ಮನೆಯ ಆವರಣದಲ್ಲೇ ಮಗನ ನೆರವಿನೊಂದಿಗೆ 5 ಅಡಿ ಸುತ್ತಳತೆಯ ಬಾವಿ ತೋಡಲು ಆರಂಭಿಸಿದ್ದು, 20 ಅಡಿ ಆಗುವಾಗ ನೀರು ಸಿಕ್ಕಿದೆ. ಕುಡಿಯುವ ಉದ್ದೇಶಕ್ಕೆ ಬೇಕಾದಷ್ಟು ನೀರು ಸಿಗಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಾದಯ್ಯ ಅವರು, ‘ಸ್ವಾತಂತ್ರ ಪೂರ್ವದಿಂದಲೂ ನಾವು ಇದೇ ಸ್ಥಳದಲ್ಲಿ ವಾಸವಾಗಿದ್ದು, ಕುಡಿಯುವ ನೀರಿಗಾಗಿ ತೆರೆದ ಬಾವಿಯನ್ನೇ ಅವಲಂಬಿಸಿದ್ದೆವು. ಬಾವಿಯಲ್ಲಿನ ನೀರು ಬತ್ತಿಹೋದ ಕಾರಣ ಕೈ ಪಂಪು ಅವಲಂಬಿಸಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿತ್ತು’ ಎಂದರು.
‘ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಅಭಾವವಿದ್ದುದರಿಂದ ಗ್ರಾಮಪಂಚಾಯಿತಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ’ ಎಂದು ದೂರಿದರು.
ಗುಡ್ಡಗಾಡು ಪ್ರದೇಶವಾದ್ದರಿಂದ ಕಷ್ಟ’
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್ ಪ್ರತಿಕ್ರಿಯಿಸಿ ‘ಈ ಮನೆಗಳಿಗೆ ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಪೂರೈಸಲಾಗಿದೆ. ಗುಡ್ಡಗಾಡು ಪ್ರವೇಶವಾಗಿರುವುದರಿಂದ ಕಿರು ನೀರು ಸರಬರಾಜು ಯೋಜನೆ ಅಡಿ ಪೈಪ್ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಜಲಜೀವನ್ ಮಿಷನ್ ಅಡಿ ಸಂಪರ್ಕ ಕಲ್ಪಿಸಲಾಗುತ್ತಿದ್ದು ಅನುಷ್ಠಾನಗೊಂಡ ನಂತರ ನೀರಿನ ಸಮಸ್ಯೆ ಕಾಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.