ಹನೂರು: ಗುಂಡಾಲ್ ಜಲಾಶಯದ ಅರಣ್ಯದಂಚಿನ ತೋಟದ ಮನೆಗಳಲ್ಲಿ ಜಾನುವಾರುಗಳನ್ನು ತಿಂದು ಭೀತಿ ಹುಟ್ಟಿಸಿದ್ದ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರೆದಿದ್ದ, ಪತ್ತೆಗಾಗಿ ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾ ಬಳಸಿದೆ.
ಹತ್ತು ದಿನಗಳಾದರೂ ಚಿರತೆ ಬೋನಿಗೆ ಬಿದ್ದಿಲ್ಲ. ಜೂ.5 ರಿಂದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಚಿರತೆ ಚಲನ ವಲನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಡ್ರೋನ್ ಬಳಕೆ:
ಚಿರತೆ ಕಾರ್ಯಪಡೆ 3 ದಿನಗಳಿಂದ ಗುಂಡಾಲ್ ಜಲಾಶಯದ ಸುತ್ತ ಚಿರತೆ ಚಲನವಲವನ್ನು ಪತ್ತೆ ಹಚ್ಚುವ ಸಲುವಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಕ್ಯಾಮೆರಾ ಅಳವಡಿಸಿದ ಡ್ರೋನ್ ಬಳಸಿ ಚಿರತೆ ಇರುವ ಜಾಗವನ್ನು ಪತ್ತೆ ಹಚ್ಚಲಾಗುತ್ತಿದೆ. ಕ್ಯಾಮೆರಾ ಚಿರತೆಯ ತಾಪಮಾನವನ್ನು ಪತ್ತೆ ಹಚ್ಚಿ ಇರುವ ಸ್ಥಳದ ಫೋಟೊವನ್ನು ಕಳುಹಿಸುತ್ತದೆ. ಅಲ್ಲಿ ಬೋನ್ ಇಟ್ಟು ಚಿರತೆ ಹಿಡಿಯಲು ಕ್ರಮಜರುಗಿಸಲಾಗುತ್ತದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ವಾಸು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.