ADVERTISEMENT

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ನಿಷೇಧ: ಆದೇಶ ಹಿಂಪಡೆದ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 14:23 IST
Last Updated 17 ಫೆಬ್ರುವರಿ 2024, 14:23 IST

ಗುಂಡ್ಲುಪೇಟೆ: ಸಾರ್ವಜನಿಕರು ಹಾಗೂ ಭಕ್ತರಿಂದ ಭಾರಿ ಟೀಕೆ ವ್ಯಕ್ತವಾದ ಹಿನ್ನೆಲೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3ಗಂಟೆಯೊಳಗೆ ಬಸ್ ಸಂಚಾರ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ತಹಶೀಲ್ದಾರ್ ಒಂದೇ‌‌ ದಿನಕ್ಕೆ ಹಿಂಪಡೆದಿದ್ದಾರೆ. ಈ ಮೂಲಕ ಪ್ರವಾಸಿಗರಿಗೆ ಎಂದಿನಂತೆ ದರ್ಶನ ಸಿಗಲಿದೆ.

ವಿವಿಧ ಕಾರಣ ನೀಡಿ ತಾಲ್ಲೂಕು ಆಡಳಿತ ಹಾಗೂ ತಹಶೀಲ್ದಾರ್ ಟಿ.ರಮೇಶ್ ಬಾಬು ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3ಗಂಟೆಗೆ ಬಸ್ ಸಂಚಾರ ನಿಷೇಧಿಸಿ ಗುರುವಾರ ಆದೇಶ ಹೊರಡಿಸಿದ್ದರು. ಆದರೆ, ಸಾರ್ವಜನಿಕರು ಹಾಗೂ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಕನ್ನೇಗಾಲ ಗ್ರಾಮಸ್ಥರು ಸ್ವತಃ ತಹಶೀಲ್ದಾರ್ ಬಳಿ ಆದೇಶ ಹಿಂಪಡೆಯುವಂತೆ ಲಿಖಿತ ಮನವಿ ಸಲ್ಲಿಸಿದ್ದರು. ‌ಈ‌ ಕುರಿತು ತಹಶೀಲ್ದಾರ್ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಅವರ ಸೂಚನೆ ಮೇರೆಗೆ ಈ ಹಿಂದೆ ಇದ್ದ ನಿಯಮದಂತೆ 4ರವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು ಹೊಸ ಆದೇಶ ಹಿಂಪಡೆದಿದ್ದಾರೆ. ಜೊತೆಗೆ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿ ನೇಮಿಸಿ ದೇವಾಲಯಕ್ಕೆ ಪ್ರಸಾದ ತಿನ್ನಲು ಬರುವ ಕಾಡಾನೆಯ ಮೇಲೆ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ಈ ಕುರಿತು ತಹಶೀಲ್ದಾರ್ ಟಿ.ರಮೇಶ್ ಬಾಬು ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ‘ದೂರದ ಊರುಗಳಿಂದ ಬರುವ ಪ್ರವಾಸಿಗರು, ಭಕ್ತರು ಹಾಗೂ ಸಾರ್ವಜನಿಕರಿಗೆ 3ರ ಒಳಗೆ ಬಸ್ ಸಂಚಾರ ನಿಷೇಧ ಆದೇಶದಿಂದ‌ ಸಮಸ್ಯೆಯಾಗುತ್ತದೆ ಎಂದು ದೂರುಗಳು ಕೇಳಿಬಂದ ಹಿನ್ನೆಲೆ, ಪ್ರವಾಸಿಗರ ಅನುಕೂಲದ ಉದ್ದೇಶದಿಂದ ಹೊಸ ಆದೇಶ ಹಿಂಪಡೆಯಲಾಗಿದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.