ಕೊಳ್ಳೇಗಾಲ: ‘ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಸಾಧನ ಸಂಸ್ಥೆ ಸಹಯೋಗದಲ್ಲಿ ಸೋಮವಾರ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಕಾನೂನು ಅರಿವು ಉದ್ಘಾಟಿಸಿ ಮಾತನಾಡಿದರು.
‘ಈ ಕೃತ್ಯಕ್ಕೆ ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮನುಷ್ಯನ ಮಾನವೀಯ ಗುಣಗಳಿಗೆ ಚ್ಯುತಿ ಬಂದರೆ ಅದೇ ಮಾನವ ಕಳ್ಳ ಸಾಗಾಣಿಕೆ. ಮನುಷ್ಯನನ್ನು ಮನುಷ್ಯನಾಗಿ ಕಾಣದೇ ಮಾರಾಟದ ವಸ್ತುವಾಗಿ ಕಾಣುತ್ತಿರುವುದು ದೊಡ್ಡ ದುರಂತ. ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಕಾನೂನುಬಾಹಿರ ಹಾಗೂ ಅನೈತಿಕ ಚಟುವಟಿಕೆಗಳಾದ ವೇಶ್ಯವಾಟಿಕೆ, ಭಿಕ್ಷಾಟನೆ, ಅಂಗಾಂಗ ಮಾರಾಟ, ಅಶ್ಲೀಲ ಚಿತ್ರಗಳ ತಯಾರಿಕೆ, ಅಕ್ರಮ ಜೌಷಧಿ ಪ್ರಯೋಗ ಅಕ್ರಮ ದಂಧೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಸಾರ್ವಜನಿಕರು ದೌರ್ಜನ್ಯ ತಡೆಯುವಲ್ಲಿ ಸಹಕರಿಸಬೇಕು’ ಎಂದರು.
‘ಬಿಗಿ ಕಾನೂನುಗಳ ನಡುವೆ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಸದ್ದಿಲ್ಲದೇ ನಡೆಯುತ್ತಿದೆ. ಜನರ ಆರ್ಥಿಕ ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡು ಸಾಗಾಣಿಕೆ ಮಾಡಲಾಗುತ್ತಿದೆ. ಆಸೆ, ಆಮಿಷ ಒಡ್ಡಿ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಆದ ಕಾರಣ ಸಮಾಜದ ಪ್ರತಿಯೊಬ್ಬರೂ ಜಾಗೃತಗೊಳ್ಳಬೇಕು. ಮಕ್ಕಳ ವಿಚಾರದಲ್ಲಿ ಪೋಷಕರು ಜವಬ್ದಾರಿವಹಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾನೂನಿನ ಜ್ಞಾನವನ್ನು ಹೊಂದಬೇಕು’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ್ಯಾಧಿಕಾರಿ ಡಾ. ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ,‘ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಇಲ್ಲ ಸಲ್ಲದ ಕೆಟ್ಟ ಆಲೋಚನೆಗಳಿಗೆ ಮನಸ್ಸು ಕೊಡದೆ ಓದುವ ಕಡೆ ಗಮನಹರಿಸಬೇಕು’ ಎಂದರು.
ಕಾರ್ಯಕ್ರಮದಲ್ಲಿ ಸಾಧನ ಸಂಸ್ಥೆ ನಿರ್ದೇಶಕ ಟಿ.ಜೆ.ಸುರೇಶ್, ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ. ಪಿ.ಎಸ್.ಐ ಉಮಾವತಿ, ಉಪನ್ಯಾಸಕ ರುದ್ರೇಶ್.ಬಿ, ಕೆ.ಆರ್.ಗುರುಪ್ರಸಾದ್, ಗೀತಾ, ಮಹದೇವಮ್ಮ, ಬಿ.ಎಂ.ಗುರುಪ್ರಸಾದ್, ಶಿವಮೂರ್ತಿ, ಸವಿತಾ, ಎಂ.ಲಿಂಗಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.