ಸಂತೇಮರಹಳ್ಳಿ: ‘ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ಸೋಲಿಗ ಮಕ್ಕಳನ್ನು ಗುರುತಿಸಿ ವಸತಿ ಶಾಲೆಗೆ ದಾಖಲು ಮಾಡುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು’ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಇಲ್ಲಿನ ಕ್ರೀಡಾ ವಸತಿ ಶಾಲೆಯ ಬಿಲ್ಲುಗಾರಿಕೆ ಮತ್ತು ಕತ್ತಿವರಸೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘2004ರಲ್ಲಿ ಶಾಸಕನಾಗಿದ್ದ ಸಮಯದಲ್ಲಿ ಸಂತೇಮರಹಳ್ಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರವಾಸಿ ಮಂದಿರ ಬಳಿಯ 5 ಎಕರೆ ಜಾಗವನ್ನು ಕ್ರೀಡಾಂಗಣಕ್ಕೆ ಗುರುತಿಸಿದ್ದು, ಆಗಿನ ಕ್ರೀಡಾ ಸಚಿವರಿಗೆ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಮನವಿ ನೀಡಲಾಗಿತ್ತು. ಈ ಜಾಗದಲ್ಲಿ ಬಿಲ್ಲುಗಾರಿಕೆ ಮತ್ತು ಕತ್ತಿವರಸೆ ಕ್ರೀಡಾ ಶಾಲೆ ನಿರ್ಮಾಣವಾಗಿರುವುದು ಸಂತೋಷದ ವಿಚಾರ’ ಎಂದರು.
‘ರಾಜ್ಯದಲ್ಲೇ ಮೊದಲ ಬಾರಿಗೆ ಇಲ್ಲಿ ಕ್ರೀಡಾ ವಸತಿ ಶಾಲೆ ನಿರ್ಮಾಣವಾಗಿದೆ. ಎಸ್ಟಿ ಹಾಗೂ ಸೋಲಿಗ ಸಮುದಾಯದ ಮಕ್ಕಳು ದಾಖಲಾಗಲು ಅವಕಾಶವಿದೆ’ ಎಂದು ಹೇಳಿದರು.
‘ಕ್ರೀಡಾ ವಸತಿ ಶಾಲೆಯಲ್ಲಿ ₹1.99 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಕಾಮಗಾರಿ ನಿರ್ಮಾಣ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಬಳಿ ಶಾಲೆ ಇರುವ ಹಿನ್ನೆಲೆಯಲ್ಲಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಸಂಬಂಧಪಟ್ಟ ಗುತ್ತಿಗೆದಾರರು ಅವಧಿಯೊಳಗೆ ಪೂರ್ಣಗೊಳಿಸಬೇಕು’ ಎಂದು ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಶಿವಸ್ವಾಮಿ, ಭೂಸೇನೆ ನಿಗಮದ ಕಾರ್ಯಪಾಲಕ ಎಂಜಿನಿಯರ್ ಚಿಕ್ಕಲಿಂಗಯ್ಯ, ಎಇಇ ಮಾದಶೆಟ್ಟಿ, ಪಿಡಿಒ ಮಮತಾ, ಗುತ್ತಿಗೆದಾರ ಶಿವಕುಮಾರ್, ಕಾಂಗ್ರೆಸ್ ಪ್ರಜಾ ಪ್ರತಿನಿಧಿ ಅಧ್ಯಕ್ಷ ಸಂತೇಮರಹಳ್ಳಿ ಪಶಿ, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್ದೊರೆ, ಪಿಎಸಿಸಿ ಬ್ಯಾಂಕ್ ಉಪಾಧ್ಯಕ್ಷ ನಂಜುಂಡಪ್ಪ, ಸುಮಿತ್ರಾ, ನಂಜುಂಡಸ್ವಾಮಿ, ರಾಘವೇಂದ್ರ, ಮಹದೇವಯ್ಯ, ಚಾ.ಸಿ.ಗೋವಿಂದರಾಜ್, ಮಾದೇಶ್, ಡಿ.ಪಿ.ಪ್ರಕಾಶ್, ಶಂಕರ್ಮೂರ್ತಿ, ಕೆಇಬಿ ಗುತ್ತಿಗೆದಾರ ಮಹೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.