ಗುಂಡ್ಲುಪೇಟೆ: ಏಕರೂಪ ಹಾಗೂ ಸಮಾನ ಶಿಕ್ಷಣ ಜಾರಿಗೆ ತರಲು ಬಿಎಸ್ಪಿ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಬೇಕೆಂದು ದಕ್ಷಿಣ ಶಿಕ್ಷಕರ ಪದವೀಧರ ಕ್ಷೇತ್ರದ ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಹಾಗೂ ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಹ.ರಾ.ಮಹೇಶ್ ಮನವಿ ಮಾಡಿದರು.
ಪಟ್ಟಣದಲ್ಲಿ ದಕ್ಷಿಣ ಶಿಕ್ಷಕರ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಶಿಕ್ಷಕರನ್ನು ಇಂದು ಪಾಠ ಪ್ರವಚನಗಳ ಜೊತೆಗೆ ಚುನಾವಣೆ ಕರ್ತವ್ಯ, ಸಮೀಕ್ಷೆ ಕಾರ್ಯಗಳು ಸೇರಿ ಹಲವು ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಶಿಕ್ಷಕರು ಮಾನಸಿಕ ಖಿನ್ನತೆಗೆ ಒಳಗಾಗಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ತಮ್ಮ ವೈಯಕ್ತಿಕ ಕೆಲಸಗಳತ್ತ ಗಮನ ನೀಡಿದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಿಡಿಕಾರಿದರು.
‘6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಸಂವಿಧಾನ ಹೇಳುತ್ತದೆ. ಅದರಂತೆ ಖಾಸಗೀ ಶಾಲೆಗಳಲ್ಲಿಯೂ ಉಚಿತ ಪ್ರವೇಶಾತಿ ನೀಡಬೇಕು. ಸರ್ಕಾರಿ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲೇ ಆರಂಭವಾಗಬೇಕು ಎಂಬಿತ್ಯಾದಿ ಯೋಜನೆಗಳನ್ನು ಬಿಎಸ್ಪಿ ಪಕ್ಷ ಹಾಕಿಕೊಂಡಿದೆ. ಆದ್ದರಿಂದ ಹೆಂಡ, ಹಣ, ಕೊಡದೆ ನಿಮ್ಮ ಹಕ್ಕುಗಳನ್ನು ಉಳಿಸಿಕೊಡಲು ಸಿದ್ದರಿರುವ ಬಿಎಸ್ಪಿ ಅಭ್ಯರ್ಥಿ ಬೆಂಬಲಿಸಿ’ ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಮಹೇಶ್, ತಾಲೂಕು ಉಸ್ತುವಾರಿ ಗೋವಿಂದರಾಜು, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ಚಾಮರಾಜನಗರ ಟೌನ್ ಬಿಎಸ್ಪಿ ಅಧ್ಯಕ್ಷ ರಂಗಸ್ವಾಮಿ, ಬಿವಿಎಸ್ ಮುಖಂಡ ವಾಸು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.