ಯಳಂದೂರು: ‘ಕ್ರೂರ ವ್ಯಕ್ತಿತ್ವದ ಮನುಷ್ಯರನ್ನು ಅನುನಯದಿಂದ ಸಾತ್ವಿಕ ವ್ಯಕ್ತಿಯನ್ನಾಗಿ ಬದಲಿಸುವ ಶಕ್ತಿ ಇರುವ ಏಕೈಕ ಚಿಂತಕ ಗಾಂಧಿ ಮಹಾತ್ಮ. ಭಾರತದ ಚರಿತ್ರೆಯಲ್ಲಿ ಬಾಪು ಹೋರಾಟದ ಬದುಕಿನ ಸರಳ ತತ್ವ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ಆರ್.ಜಯಪ್ರಕಾಶ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವೋದಯ (ಹುತಾತ್ಮ) ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಡಿ ವಿಶ್ವಕ್ಕೆ ಇವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳ ಮಹತ್ವವನ್ನು ತಿಳಿಸಬೇಕಿದೆ. ಅವರ ಸರಳ ಬದುಕು ಮತ್ತು ಉನ್ನತ ಚಿಂತನೆಯ ಮಹತ್ವವನ್ನು ಜೀವನದ ಉದ್ದಕ್ಕೂ ಪಾಲಿಸಬೇಕಿದೆ. ಪರಿಸರ ಸಂರಕ್ಷಣೆ, ಮಾತೃಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಯೋಗ ನಡೆಸುತ್ತಲೇ ಶ್ರಮ ಸಂಸ್ಕೃತಿಗೆ ಗಾಂಧೀಜಿ ಪ್ರಥಮ ಸ್ಥಾನ ನೀಡಿದ್ದರು’ ಎಂದರು.
‘ದೇಶದ ಏಕತೆ, ಸಮಗ್ರತೆ ಮತ್ತು ಸರ್ವಧರ್ಮ ಸಮಭಾವದ ಅಗತ್ಯವನ್ನು ತಿಳಿಸಿ, ಆಡಂಬರ ರಹಿತ ಬದುಕು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಪಣತೊಟ್ಟರು’ ಎಂದು ಹೇಳಿದರು.
ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.