ಚಾಮರಾಜನಗರ: ‘ಹಿಮೊಫೀಲಿಯಾ ಮಾರಣಾಂತಿಕ ಕಾಯಿಲೆ ಅಲ್ಲ. ಆದರೆ, ನೋವು ಬಂದಾಗ ಅನುಭವಿಸುವುದು ತುಂಬಾ ಕಷ್ಟ’ ಎಂದು ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್ ಮಂಗಳವಾರ ಹೇಳಿದರು.
ನಗರದ ಬಿ.ರಾಚಯ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದೊಂದಿಗೆ ಇಂಟಾಸ್ ಫೌಂಡೇಷನ್ ಆಯೋಜಿಸಿದ್ದ ಹಿಮೊಫೀಲಿಯಾ ರೋಗಿಗಳ ಸಹಾಯ ಔಷಧಿ ವಿತರಣೆ, ಫಿಸಿಯೋಥೆರಪಿ, ವೈದ್ಯರ ಸಮಾಲೋಚನೆ ಶಿಬಿರದಲ್ಲಿ ಅವರು ಮಾತನಾಡಿದರು.
‘ಹಿಮೋಫಿಲಿಯಾ ರೋಗದಿಂದ ಆಗುವ ಕಷ್ಟಗಳ ಬಗ್ಗೆ ರೋಗಿಗಳಿಗೆ, ಅವರ ತಂದೆ, ತಾಯಿ ಮತ್ತು ಚಿಕಿತ್ಸೆ ನೀಡುವವರಿಗೆ ಮಾತ್ರ ಅದರ ಗೊತ್ತು. ಇದಕ್ಕೆ ಔಷಧಿ ಲಭ್ಯವಿದ್ದರೂ, ಮುಕ್ತ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಸರ್ಕಾರವೇ ಸರಬರಾಜು ಮಾಡುತ್ತದೆ. ಜಿಲ್ಲೆಯಲ್ಲಿ ನಮ್ಮಲ್ಲಿ ನೋಂದಾಯಿಸಿದ 24 ರೋಗಿಗಳಿದ್ದಾರೆ’ ಎಂದರು.
‘ಔಷಧಿ ಕೊರತೆ ಬಗ್ಗೆ ಕಳೆದ ವರ್ಷ ರೋಗಿಗಳು ಸಚಿವರ ಮುಂದೆ ಪ್ರಸ್ತಾಪಿಸಿದ್ದರು. ಕಾಯಿಲೆ ಬಂದಾಗ ಔಷಧಿ ಹುಡುಕಿಕೊಂಡು ಹೋಗುವ ಬದಲು ನಿಮ್ಮ ಹತ್ತಿರ ಇದ್ದರೆ ಧೈರ್ಯ ಇರುತ್ತದೆ. ಈಗ ಇಂಟಾಸ್ ಕಂಪನಿ ಔಷಧಿ ನೀಡಲು ಮುಂದೆ ಬಂದಿದ್ದು, ಒಂದು ಚುಚ್ಚು ಮದ್ದಿಗೆ ₹ 16 ಸಾವಿರ ಆಗುತ್ತದೆ. ಒಂಬತ್ತು ಜನರಿಗೆ ಉಚಿತವಾಗಿ ಕೊಡುತ್ತಿದ್ದಾರೆ’ ಎಂದರು.
ಬೆಂಗಳೂರಿನ ಇಂಟಾಸ್ ಫೌಂಡೇಷನ್ ಕಂಪನಿಯ ಕುದ್ಸಿಯಾ ಬೇಗಂ ಮಾತನಾಡಿ, ‘24 ರೋಗಿಗಳಿಗೆ ಫಿಸಿಯೊಥೆರಪಿ ಮಾಡಿ, ಒಂಬತ್ತು ಜನರಿಗೆ ಔಷಧಿ ನೀಡಿದ್ದೇವೆ ಎಂದು ತಿಳಿಸಿದರು. ರೋಗಿಗಳಿಗೆ ₹3.5 ಲಕ್ಷದ ಔಷಧಿ ನೀಡಲಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರವಿಕುಮಾರ್, ಮಕ್ಕಳ ತಜ್ಞೆ ಡಾ.ಲಕ್ಷ್ಮಿ
ಮನೋತಜ್ಞರಾದ ಡಾ. ರಾಜೇಶ್, ಫೆಥಾಲಜಿಯ ಡಾ.ರವಿತೇಜ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.