ಚಾಮರಾಜನಗರ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾದದ್ದು, ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಅಭಿವೃದ್ದಿ ಹೊಂದಲು ಅವರು ಕಾರಣೀಭೂತರು ಎಂದು ಕೊಳ್ಳೇಗಾಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೊಂಗರಳ್ಳಿ ಎಸ್.ನಾಗರಾಜು ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘1911ರಲ್ಲಿ ಭಾರತದ ಮೊಟ್ಟಮೊದಲ ಬೃಹತ್ ಜಲಾಶಯ ಕೃಷ್ಣರಾಜ ಸಾಗರ ನಿರ್ಮಾಣ ಮಾಡಿದ್ದರು. 1900ರಲ್ಲಿಯೇ ಶಿವನಸಮುದ್ರ ಬಳಿ ಜಲವಿದ್ಯುತ್ ಕೇಂದ್ರ ಸ್ಥಾಪನೆ ಮಾಡಿದ್ದರು. ಇದು ಏಷ್ಯಾಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆ ಎಂಬ ಕೀರ್ತಿ ಪಡೆದಿದೆ. ಶಿಕ್ಷಣ, ಆರೋಗ್ಯ, ಕೃಷಿಗೆ ಒತ್ತು, ನೀರಾವರಿ ಆದ್ಯತೆ ನೀಡಿದ್ದರು. ಭದ್ರಾವತಿ ಕಬ್ಬಿಣ ಕಾರ್ಖಾನೆ, ರೈಲು ಯೋಜನೆ ಜಾರಿಗೆ ತಂದರು. ಕೈಗಾರಿಕೆ ಸ್ಥಾಪನೆ ಮಾಡಿದರು’ ಎಂದು ಹೇಳಿದರು.
ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ್ ಜ್ಞಾನದೃಷ್ಠಿ, ದೂರದೃಷ್ಠಿ, ಕರ್ತೃದೃಷ್ಠಿ ಎಲ್ಲ ದೃಷ್ಠಿಕೋನಗಳನ್ನು ಇಟ್ಟುಕೊಂಡಿದ್ದರು. ಅವರ ಆದರ್ಶಗಳನ್ನು ಇಂದಿನ ಆಡಳಿತಗಾರ ಅಧ್ಯಯನ ಮಾಡಿದರೆ ಎಲ್ಲ ಹಳ್ಳಿಗಳು ಮೈಸೂರು ಮಾದರಿಯಲ್ಲಿ ಅಭಿವೃದ್ದಿ ಹೊಂದಲು ಸಾಧ್ಯ’ ಎಂದರು.
ಬರಹಗಾರ ಲಕ್ಷ್ಮಿನರಸಿಂಹ ಮಾತನಾಡಿ, ‘ಚಾಮರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸುತ್ತಿರುವುದು ಔಚಿತ್ಯಪೂರ್ಣ. ಚಾಮರಾಜನಗರಕ್ಕೆ ರೈಲು ಸಂಪರ್ಕ ಕಲ್ಪಿಸಿಕೊಟ್ಟ ನಾಲ್ವಡಿಕೃ ಷ್ಣರಾಜ ಒಡೆಯರ್ ಹೆಸರನ್ನು ನಗರದ ರೈಲ್ವೆ ನಿಲ್ದಾಣಕ್ಕೆ ಅಥವಾ ತಿರುಪತಿ ಎಕ್ಸ್ಪ್ರೆಸ್ ರೈಲಿಗೆ ನಾಮಕರಣ ಮಾಡಬೇಕು. ಅವರ ಆದರ್ಶ ಇಂದಿನ ರಾಜಕಾರಣಿಗಳಿಗೆ ಬರಬೇಕು’ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಕೆ.ಎಂ.ನಾಗರಾಜು, ಮಹೇಶ್ಗೌಡ, ಸರಸ್ವತಿ, ರವಿಚಂದ್ರಪ್ರಸಾದ್ ಕಹಳೆ, ಉಪನ್ಯಾಸಕ ರವಿಚಂದ್ರ, ಬಿ.ಕೆ.ಆರಾಧ್ಯ, ಸುಮುಖ್, ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಶಿವಲಿಂಗಮೂರ್ತಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.