ADVERTISEMENT

ಗುಂಡ್ಲುಪೇಟೆ | ಬೆಳ್ಳುಳ್ಳಿಗೆ ಬಂಪರ್ ಬೆಲೆ: ಬೆಳೆಗಾರರ ಮೊಗದಲ್ಲಿ ಮಂದಹಾಸ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 200 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ: ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 500 ದರ

ಮಲ್ಲೇಶ ಎಂ.
Published 7 ಸೆಪ್ಟೆಂಬರ್ 2024, 7:45 IST
Last Updated 7 ಸೆಪ್ಟೆಂಬರ್ 2024, 7:45 IST
ಮೆಟ್ಟುಪಾಳ್ಯಂ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಮಾರಾಟಕ್ಕೆ ಇಟ್ಟಿರುವುದು.
ಮೆಟ್ಟುಪಾಳ್ಯಂ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಮಾರಾಟಕ್ಕೆ ಇಟ್ಟಿರುವುದು.   

ಗುಂಡ್ಲುಪೇಟೆ: ಕೃಷಿಯಲ್ಲಿ ಏರಿಳಿತಗಳು ಸಾಮಾನ್ಯ. ಕೆಲವೊಮ್ಮೆ ರೈತ ಬೆಳೆದ ಬೆಳೆಗೆ ಉತ್ತಮ ದರ ಸಿಕ್ಕರೆ, ಕೆಲವು ಬಾರಿ ದರ ಪಾತಾಳಕ್ಕೆ ಕುಸಿದು ಖರ್ಚು ಮಾಡಿದ ಹಣವೂ ಕೈಸೇರದೆ ಕೈಸುಟ್ಟುಕೊಳ್ಳುತ್ತಾರೆ. ಹತ್ತು ವರ್ಷದ ಹಿಂದೆ ಬೆಳ್ಳುಳ್ಳಿ ಬೆಳೆಯಲ್ಲಿ ಅತ್ಯಧಿಕ ಲಾಭ ಕಂಡಿದ್ದ ರೈತರು ದಶಕದ ಬಳಿಕ ಮತ್ತೊಮ್ಮೆ ಲಾಭದ ಮುಖ ನೋಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ಬೆಲೆ ₹ 500ರವರೆಗೆ ಮುಟ್ಟಿದ್ದು ತಾಲ್ಲೂಕಿನ ಬೆಳ್ಳುಳ್ಳಿ ಬೆಳೆಗಾರರು ಖುಷಿಯಾಗಿದ್ದಾರೆ. ತಾಲ್ಲೂಕಿನ ಹಂಗಳ ಹೋಬಳಿ ಹಾಗೂ ಕಸಬಾ ಹೋಬಳಿಯಲ್ಲಿ ರೈತರು ಹೆಚ್ಚು ಬೆಳ್ಳುಳ್ಳಿ ಬೆಳೆದಿದ್ದು ಬಂಪರ್ ಲಾಭದ ನಿರೀಕ್ಷೆಯಲ್ಲಿದ್ದಾರೆ.  ಈ ಮುಂಗಾರಿನಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದ ರೈತರು ಕಟಾವು ಮಾಡಿದ್ದು ಉತ್ತಮ ಲಾಭ ಪಡೆದಿದ್ದಾರೆ.

ಬೆಳ್ಳುಳ್ಳಿ ಬಿತ್ತನೆ ಬೀಜಕ್ಕೆ ಮತ್ತು ಮಾರಾಟಕ್ಕೆ ತಮಿಳುನಾಡಿನ ಮೆಟ್ಟುಪಾಳ್ಯಂ ಪ್ರಮುಖ ಮಾರುಕಟ್ಟೆ. ತಾಲ್ಲೂಕಿನ ಗಡಿಗೆ ತಮಿಳುನಾಡು ಹೊಂದಿಕೊಂಡಿರುವುದರಿಂದ ಬಹುತೇಕ ರೈತರು ಮೆಟ್ಟುಪಾಳ್ಯಂ ಮತ್ತು ಊಟಿಯ ಕೆಲ ಭಾಗಗಳಲ್ಲಿ ಸಿಗುವ ಬೆಳ್ಳುಳ್ಳಿ ಬಿತ್ತನೆ ಬೀಜಗಳನ್ನು ಕೆ.ಜಿಗೆ ₹ 200 ರಿಂದ ₹ 400 ದರ ಕೊಟ್ಟು ತಂದು ನಾಟಿ ಮಾಡಿದ್ದರು. 

ADVERTISEMENT

ಬಿತ್ತನೆ ಬೀಜದ ದರ ಹೆಚ್ಚಾಗಿದ್ದರೂ ಹಲವು ರೈತರು ನಾಟಿ ಮಾಡಿದ್ದರು. ಅದೃಷ್ಟಕ್ಕೆ ಬೆಳ್ಳುಳ್ಳಿಗೆ ನಿರೀಕ್ಷೆಗಿಂತಲೂ ಹೆಚ್ಚಿನ ದರ ಸಿಕ್ಕಿದೆ. ಕೇವಲ ಮೂರು ತಿಂಗಳ ಬೆಳ್ಳುಳ್ಳಿ ಬೆಳೆಯಲ್ಲಿ ಲಕ್ಷಾಂತರ ರೂಪಾಯಿ ಆದಾಯ ನೋಡುತ್ತಿದ್ದಾರೆ.

ಸಾಮಾನ್ಯವಾಗಿ ಬೆಳ್ಳುಳ್ಳಿಗೆ ಉತ್ತಮ ದರ ದೊರೆಯುವುದು ಅಪರೂಪ.  ಇಳುವರಿ ಕುಸಿತ, ಬೆಲೆ ಇಳಿಕೆಯಿಂದ ನಷ್ಟ ಅನುಭವಿಸುವ ಸನ್ನಿವೇಶವೇ ಹೆಚ್ಚು. ಆದರೆ, ಅಪರೂಪಕ್ಕೆ ಒಳ್ಳೆಯ ದರ ಸಿಕ್ಕಿದೆ. ಎಕರೆಗೆ ₹ 10 ರಿಂದ ₹ 12 ಲಕ್ಷ ಸಂಪಾದನೆ ನಿರೀಕ್ಷೆ ಎನ್ನುತ್ತಿದ್ದಾರೆ ಬೆಳ್ಳುಳ್ಳಿ ಬೆಳೆದ ರೈತರು.

ನಾಲ್ಕು ತಿಂಗಳ ಹಿಂದೆ ಲಕ್ಷ ರೂಪಾಯಿ ಸಾಲ ಮಾಡಿ ಬೆಳ್ಳುಳ್ಳಿ ತಂದು ಬೇಸಾಯ ಮಾಡಿದ್ದು ಉತ್ತಮ ಬೆಳೆ ಮತ್ತು ಬೆಲೆ ಸಿಕ್ಕಿರುವುದರಿಂದ ಖರ್ಚು ಕಳೆದು ₹ 8 ಲಕ್ಷ ಲಾಭದ ನಿರೀಕ್ಷೆ ಇದೆ ಎನ್ನುತ್ತಾರೆ ಮಗುವಿನಹಳ್ಳಿ ಗ್ರಾಮದ ಚಿನ್ನಸ್ವಾಮಿ ಮತ್ತು ಸತ್ಯ.

200 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ

ತಾಲ್ಲೂಕಿನಲ್ಲಿ ಸುಮಾರು 150 ರಿಂದ 200 ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿದೆ. ಹಂಗಳ ಭಾಗದಲ್ಲಿ ಬೆಳ್ಳುಳ್ಳಿ ಬೆಳೆಯುವ ಪ್ರಮಾಣ ಹೆಚ್ಚು. ಈ ಬಾರಿ ಉತ್ತಮ ಬೆಲೆ ಸಿಕ್ಕಿರುವುದು ರೈತರಿಗೆ ಉತ್ತಮ ಲಾಭ ಸಿಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.