ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಬೆಟ್ಟದಲ್ಲಿ 512 ಕೊಠಡಿಗಳ ಅತಿಥಿ ಗೃಹ ನಿರ್ಮಾಣ , ಎರಡನೇ ಹಂತದ 386 ಕೊಠಡಿ ನಿರ್ಮಾಣ ಪೂರ್ಣಗೊಂಡು ಬಣ್ಣ ಬಳಿಯುವುದು ನೀರು ಸರಬರಾಜು ಹಾಗೂ ವಿದ್ಯುತ್ ಸಂಪರ್ಕದ ಕೆಲಸ, ಕಾಮಗಾರಿ ಶೀಘ್ರ ಮುಗಿಸಬೇಕು ಎಂದು ಜಿಲ್ಲಾಧಿಕಾರಿಗೆ ಅಧಿಕಾರಿಗಳು ತಿಳಿಸಿದರು.
ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದ ವರೆಗೆ ಕಾಲ್ನಡಿಗೆ ಮಾರ್ಗದಲ್ಲಿ ಗ್ರಾನೈಟ್ ಮೆಟ್ಟಿಲು ನಿರ್ಮಾಣ ಕೆಲಸ, ಡಾರ್ಮೆಟ್ರಿ ಕಟ್ಟಡ ಕಾಮಗಾರಿ ಬೇಗ ಮುಗಿಸಬೇಕು ಎಂದು ಅವರು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚಿನ್ನಣ್ಣ ಅವರಿಗೆ ತಾಕೀತು ಮಾಡಿದರು.
ದೀಪದಗಿರಿ ಒಡ್ಡಿನಲ್ಲಿ ಮಹದೇಶ್ವರ ಸ್ವಾಮಿಯ ಪ್ರತಿಮೆಯ ಅವರಣದ ಸುತ್ತಲೂ ತಡೆಗೊಡೆ ನಿರ್ಮಾಣ, ಬಸ್ ನಿಲ್ದಾಣದ ಬಳಿ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ, ಒಳಚರಂಡಿ, ನೀರು ಸರಬರಾಜು ಸೇರಿದಂತೆ ಪ್ರಾಧಿಕಾರ ಪ್ರಗತಿ ಬಗ್ಗೆ ಮಾಹಿತಿ ಪಡೆದರು.
ದೀಪದ ಗಿರಿ ಒಡ್ಡು ಪ್ರತಿಮೆ ಒಳಾಂಗಣ ಕಾಮಗಾರಿ, ತಡೆಗೊಡೆ ನಿರ್ಮಾಣ ಸೇರಿದಂತೆ ಪ್ರಾಧಿಕಾರ ಕೈಗೊಂಡಿರುವ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಒಂದು ವಾರದಲ್ಲಿ ಕಾಮಗಾರಿ ವೇಗ ಹೆಚ್ಚಿಸ ಎಂದು ಜಿಲ್ಲಾಧಿಕಾರಿ ಎಂಜಿಯರ್ಗೆ ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಮನೆಗಳು ಹಾಗೂ ಲಾಡ್ಜ್ ಬಗ್ಗೆ ಮಾಹಿತಿ ಪಡೆದರು. ಅನಧಿಕೃತ ಕಟ್ಟಡಗಳ ಪರಿಶೀಲ ನಡೆಸಬೇಕು. ತೆರಿಗೆ ವಸೂಲಿ ಮಾಡಬೇಕು. ನೀರಿನ ಸಮಸ್ಯೆಯಾಗಿದಂತೆ ನೋಡಿಕೊಳ್ಳಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಈಗಾಗಲೇ ಅಕ್ರಮ ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಮಾಹಿತಿ ಬಂದಿದೆ. ಮದ್ಯಮಾರಾಟ ಮಾಡಿ ಶ್ರೀಕ್ಷೇತ್ರಕ್ಕೆ ಕಳಂಕ ತರುವುದು ಬೇಡ. ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು . ಧೂಮಪಾನ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗೆ ತಿಳಿಸಿದರು.
ಸಭೆಯ ಬಳಿಕ ದೀಪದಗಿರಿ ಒಡ್ಡಿನಲ್ಲಿ ಮಹದೇಶ್ವರ ಪ್ರತಿಮೆಯ ತಳಭಾಗದ ಒಳಾಂಗಣದಲ್ಲಿ ನಡೆಯುತ್ತಿರುವ ಮಹದೇಶ್ವರ ಚರಿತ್ರೆ ಅನಾವರಣ ಮಾಡುವ ಪ್ರತಿಮೆ ಕಲಾಕೃತಿಗಳ ಕಾಮಗಾರಿ ಬಗ್ಗೆ ಶಾಸಕ ಮಂಜುನಾಥ್ , ಜಿಲ್ಲಾಧಿಕಾರಿ ಮಾಹಿತಿ ಪಡೆದರು.
ಬೆಟ್ಟದಲ್ಲಿ ಕಾಂಕ್ರಿಟ್ ಅಭಿವೃದ್ಧಿಗಳು ಹೆಚ್ಚಾಗಿದ್ದು, ಪರಿಸರಸ್ನೇಹಿ ಕಾರ್ಯಗಳನ್ನು ಕೈಗೊಂಡು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಬೇಕು. ಮಾದೇಶ್ವರ ಪ್ರತಿಮೆಯ ಆಕರ್ಷಣೆ ಹೆಚ್ಚಾಗುವಂತೆ ವರ್ಣರಂಜಿತ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಲೂರು ಮಠಾಧ್ಯಕ್ಷರು ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಪ್ರಾಧಿಕಾರ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ, ತಹಶೀಲ್ದಾರ್ ಗುರುಪ್ರಸಾದ್, ಎಎಇ ರಂಗಸ್ವಾಮಿ, ಪಿಡಿಒ ಕಿರಣ್ ಕುಮಾರ್, ರಾಜು ಕುಮಾರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚಿನ್ನಣ್ಣ, ಮಹೇಶ್, ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.