ಚಾಮರಾಜನಗರ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಬೆಳೆಗಾರರ ಸಂಘದ ಪದಾಧಿಕಾರಿಗಳು, ರೈತರು ಭಾನುವಾರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ನಗರದ ಸೋಮವಾರಪೇಟೆ ಹತ್ತಿರ ಮುಖ್ಯರಸ್ತೆಯಲ್ಲಿ ಸೇರಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ರಾಜ್ಯದಲ್ಲಿ ಬರಗಾಲವಿದ್ದು, ಕೇವಲ 16 ಟಿಎಂಸಿ ಅಡಿ ನೀರು ಕಬಿನಿ, ಕೆಆರ್ಎಸ್ನಲ್ಲಿ ಸಂಗ್ರಹ ಇದೆ. ಕುಡಿಯುವ ನೀರಿಗೆ ಇಟ್ಟಿರುವ ನೀರನ್ನು ಸರ್ಕಾರವು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಒಲೈಕೆ ಮಾಡಲು ಹರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ 223 ತಾಲ್ಲೂಕುಗಳಲ್ಲಿ ಬರವಿದ್ದು, ಕಾವೇರಿ ಅಚ್ಚುಗಟ್ಟು ಭಾಗದಲ್ಲಿ ಕುಡಿಯಲು ನೀರಿಲ್ಲ. ಕೆರೆಕಟ್ಟೆಗಳಿಗೆ ನೀರು ತಂಬಿಸುತ್ತಿಲ್ಲ. ಈ ಭಾಗದ ಜನ, ಜಾನುವಾರು, ಪಶುಪಕ್ಷಿಗಳಿಗೆ ನೀರು ಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲೂ ನ್ಯಾಯಾಲಯದ ಆದೇಶ ಇದೆ ಎಂದು ಹೇಳಿ ನದಿ ಮೂಲಕ ತಮಿಳುನಾಡಿಗೆ ನೀರು ಬಿಟ್ಟುರಾಜ್ಯದ ಜಲಾಶಯಗಳನ್ನು ಬರಿದು ಮಾಡಲು ರಾಜ್ಯ ಸರ್ಕಾರ ಹೊರಟಿದೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ, ನೀರಾವರಿ ಸಚಿವರಿಗೆ ರೈತನ್ನು ಕಾಪಾಡುವ ಇಚ್ಚಾಶಕ್ತಿ ಇಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ತಕ್ಷಣವೇ ರಾಜ್ಯದ ಜನರಿಗೆ ಕುಡಿಯುವ ನೀರನ್ನು ಉಳಿಸುವ ಮೂಲಕ ಜನರ ಹಿತಕಾಪಾಡಬೇಕು. ರಾಜ್ಯದ ಜನತೆಗೆ ಕುಡಿಯುವ ನೀರು ಉಳಿಸಬೇಕು. ಇಲ್ಲದಿದ್ದರೆ ಮುಂದಿನ ತಕ್ಕಪಾಠ ಕಲಿಸಬೇಕಾಗುತ್ತದೆ’ ಎಂದು ಭಾಗ್ಯರಾಜ್ ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ , ಹಾಡ್ಯರವಿ, ಹನುಮಯ್ಯ, ಉಡಿಗಾಲ ಮಂಜುನಾಥ್, ಛೇರ್ಮನ್ ಗುರು, ಮಲ್ಲಪ್ಪ ಅರಳಿಕಟ್ಟೆ, ಕುಮಾರ್, ಕನಕ ಜನ್ನೂರು, ಶಾಂತರಾಜು ಮುದ್ದಹಳ್ಳಿ, ಚಿಕ್ಕ ಸ್ವಾಮಿ, ಶಿವಣ್ಣ ದೇವನೂರು, ನಾಗೇಂದ್ರ ಅಂಬಳೆ, ಮಹದೇವಸ್ವಾಮಿ, ಒಳಗೆರೆಗಣೇಶ್, ಮಲಿಯೂರು ಮಹೇಂದ್ರ, ಪ್ರವೀಣ್, ಸಿದ್ದರಾಜು, ಸತೀಶ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.