ಗುಂಡ್ಲುಪೇಟೆ: ಬೆಳಚಲವಾಡಿ ಗ್ರಾಮದಲ್ಲಿ ಶುಕ್ರವಾರ ಶಿವರಾತ್ರಿ ದಿನ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ, ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಮಹಿಳೆಯರು ಮಾತನಾಡಿ, ಬೆಳಚಲವಾಡಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ತೊಂದರೆ ಉಂಟಾಗಿದೆ. 2-3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ ಬೇಸಿಗೆಯಲ್ಲಿ 15 ದಿನಗಳಿಗೊಮ್ಮೆ ನಲ್ಲಿಗಳಲ್ಲಿ ನೀರು ಬಿಡಲಾಗುತ್ತಿದೆ. ನೀರಿಗೆ ತಾತ್ವಾರ ಉಂಟಾಗಿದ್ದು,ಜನರು ಪರದಾಡುವಂತಾಗಿದೆ. ಜೊತೆಗೆ ಖಾಸಗಿ ಬಾವಿ– ಪಂಪ್ ಸೆಟ್ಗಳನ್ನು ಅವಲಂಬಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬೇಗೂರು ಪಂಚಾಯಿತಿ ಪಿಡಿಒ, ಅಧ್ಯಕ್ಷರು, ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಶೀಘ್ರ ಬಗೆಹರಿಸಬೇಕು. ಇಲ್ಲದಿದ್ದರೆ ನೀರಿಗೆ ಹಾಹಾಕಾರ ಬಂದೊದಗುತ್ತದೆ. ಹಿಂದಿನಂತೆ 2 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಗ್ರಾಮ ನಿವಾಸಿಗಳಾದ ರತ್ನಮ್ಮ, ಸುಧಾ, ಚೈತ್ರ, ಸುಮತಿ, ಸುಮಾ, ಲೀಲಾವತಿ, ಸವಿತಾ, ಮಂಜುಳಾ, ದೇವಮ್ಮ, ಶಾಂತಿ, ಮಹಾದೇವಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.