ಸಂತೇಮರಹಳ್ಳಿ: ‘ಸಮೀಪದ ಮೂಡಲ ಅಗ್ರಹಾರ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವಲ್ಲಿ ಗ್ರಾಮಪಂಚಾಯಿತಿ ವಿಫಲವಾಗಿದೆ’ ಎಂದು ಆರೋಪಿಸಿ ಗ್ರಾಮಸ್ಥರು ದೇಮಹಳ್ಳಿ ಗ್ರಾಮಪಂಚಾಯಿತಿ ಕಚೇರಿಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
‘ಗ್ರಾಮದ ಅಭಿವೃದ್ಧಿ ಕುರಿತು ಗ್ರಾಮ ಪಂಚಾಯಿತಿಯವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕುಡಿಯುವ ನೀರು ಹಾಗೂ ಬೀದಿ ದೀಪಗಳ ಸಮಸ್ಯೆಯಿಂದ ಗ್ರಾಮದ ಜನರು ದಿನ ಕಳೆಯುತ್ತಿದ್ದಾರೆ. ಜಲ ಜೀವನ್ ಮಿಷನ್ ಯೋಜನೆಯಡಿ ಪೈಪ್ಲೈನ್ ಅಳವಡಿಸಲಾಗಿದೆ. ಸಮರ್ಪಕವಾಗಿ ಮನೆಗಳಿಗೆ ನೀರು ತಲುಪುತ್ತಿಲ್ಲ. ಸರಿಯಾಗಿ ಗೇಟ್ಗಳನ್ನು ಅಳವಡಿಸಿಲ್ಲ. ಇದರಿಂದ ಗ್ರಾಮದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಗ್ರಾಮಪಂಚಾಯಿತಿಯವರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಾತ್ರಿ ಸಮಯದಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲದೇ ನಿವಾಸಿಗಳು ಕತ್ತಲೆಯಲ್ಲಿ ತಿರುಗಾಡುವಂತಾಗಿದೆ. ಪಂಚಾಯಿತಿಗೆ ಗ್ರಾಮದಿಂದಲೇ ಹೆಚ್ಚು ಕಂದಾಯ ವಸೂಲಿ ಆಗುತ್ತಿದೆ. ಗ್ರಾಮವನ್ನು ಕಡೆಗೆಣಿಸಲಾಗಿದೆ’ ಎಂದು ದೂರಿದರು.
ಮಂಜುನಾಥ್, ಗಿರೀಶ್, ಮಹೇಶ್, ಮಲ್ಲೇಶಪ್ಪ, ವಿಶ್ವ, ವಿನೋದ್, ನಾಗೇಂದ್ರ ಕುಮಾರ್, ನಾಗರಾಜು, ಬಸವಣ್ಣ ಪ್ರತಿಭಟನೆಯಲ್ಲಿ ಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.