ಗುಂಡ್ಲುಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರು ನೀಡಿದ್ದ ಮನವಿ ಪತ್ರವನ್ನು ಕಸದ ಬಿಟ್ಟಿಗೆ ಎಸೆದಿರುವ ನಡೆ ಖಂಡಿಸಿ ಸಾಮೂಹಿಕ ನಾಯಕತ್ವ ರಾಜ್ಯ ರೈತ ಸಂಘಟನೆ ವತಿಯಿಂದ ಭಾನುವಾರ ಬೆಳಿಗ್ಗೆ ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಜಾಥಾ ಹೊರಟ ರೈತ ಸಂಘಟನೆ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಸಾಮೂಹಿಕ ನಾಯಕತ್ವದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಹಿಂದುಳಿದ ವರ್ಗ ಹಾಗೂ ರೈತರ ಮಗ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಜಿಲ್ಲೆಯ ರೈತರ ಜಲ್ವಂತ ಸಮಸ್ಯೆಗಳ ಕುರಿತು ರೈತರು ನೀಡಿದ್ದ ಮನವಿಯನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸಿದ್ದಾರೆ. ಇದು ರಾಜ್ಯದ ಎಲ್ಲಾ ರೈತರಿಗೆ ಮಾಡಿದ ಅವಮಾನವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಸಮಸ್ಯೆ ಕೇಳಲು ಆಸಕ್ತಿ ವಹಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಧಿಕಾರಿಗಳ ನಡೆ ತೀವ್ರ ಖಂಡನೀಯವಾಗಿದೆ. ಆದ್ದರಿಂದ ಈ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ರೈತ ಸಂಘಟನೆ ವತಿಯಿಂದ ಹೆದ್ದಾರಿ ತಡೆ ನಡೆಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಜೊತೆಗೆ ಚಾಮರಾಜನಗರ ಜಿಲ್ಲೆಗೆ ಸಿಎಂ ಹಾಗೂ ಸಚಿವರು ಭೇಟಿ ನೀಡಿದರೆ ಕಪ್ಪು ಬಟ್ಟೆ ಪ್ರದರ್ಶಿಸುವುದಾಗಿ ಎಚ್ಚರಿಕೆ ನೀಡಿದರು.
ರೈತರಾದ ಉತ್ತಂಗೆರೆಹುಂಡಿ ಮಹೇಶ್, ಷಣ್ಮುಖಸ್ವಾಮಿ, ಮಲ್ಲಯ್ಯನಪುರ ಪುಟ್ಟೇಗೌಡ, ಕೂತನೂರು ಗಣೇಶ್, ಹಸಗೂಲಿ ಮಹೇಶ್, ಮಾಡ್ರಹಳ್ಳಿ ಪಾಪಣ್ಣ, ಕೋಡಹಳ್ಳಿ ಸ್ವಾಮಿ, ಕಮರಹಳ್ಳಿ ಪ್ರಸಾದ್, ಬನ್ನಿತಾಳಪುರ ಮಹದೇವಶೆಟ್ಟಿ, ಚಿಕ್ಕಾಟಿ ಜಯಪ್ರಕಾಶ್, ಹೊಸಪುರ ಮರಿಸ್ವಾಮಿ, ಶೆಟ್ಟಹಳ್ಳಿ ಮಂಜುನಾಥ್, ಕಬ್ಬಹಳ್ಳಿ ಪ್ರಕಾಶ್, ಕೋಟೆಕೆರೆ ಮಹದೇವ್, ಯಡವನಹಳ್ಳಿ ಸಿದ್ದರಾಜು, ಹಳ್ಳದಮಾದಹಳ್ಳಿ ಲೋಕೇಶ್, ರಾಘವಾಪುರ ಸ್ವಾಮಿ, ಪುಟ್ಟರಾಜು, ಬೆಟ್ಟದಮಾದಹಳ್ಳಿ ಶ್ರೀನಿವಾಸ್, ಮಂಚಹಳ್ಳಿ ಮಣಿಕಂಠ, ಬರಗಿ ಸಿದ್ದರಾಜು, ಅಗತಗೌಡನಹಳ್ಳಿ ಜಗದೀಶ್, ಬೆಟ್ಟಹಳ್ಳಿ ಲೋಕೇಶ್ ದಡದಹಳ್ಳಿ ಮಹೇಶ್ ಸೇರಿದಂತೆ ಹಲವು ಮಂದಿ ರೈತ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.