ಸಂತೇಮರಹಳ್ಳಿ: ಸಮೀಪದ ಕಸ್ತೂರು ಗ್ರಾಮದ ರಸ್ತೆಯಲ್ಲಿ ಭಾಗಿರುವ ಆಲದ ಮರವನ್ನು ಕಟಾವುಗೊಳಿಸಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಬಸ್ ನಿಲ್ದಾಣದಲ್ಲಿ ಭಾಗಿರುವ ಆಲದ ಮರದ ಮುಂಭಾಗಕ್ಕೆ ಆಗಮಿಸಿದ ಗ್ರಾಮಸ್ಥರು ಸಾಮಾಜಿಕ ಅರಣ್ಯ ಇಲಾಖೆ ವಿರುದ್ದ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಆಲದ ಮರ ಒಣಗಿ ನಿಂತಿದ್ದು, ಮಳೆ ಗಾಳಿಗೆ ಬೀಳುವ ಹಂತ ತಲುಪಿದೆ. ರಸ್ತೆಯಲ್ಲಿರುವ ಮರಗಳು ನೂರು ವರ್ಷದಷ್ಟು ಹಳೆಯದಾಗಿವೆ. ಕಳೆದ 6 ತಿಂಗಳ ಹಿಂದೆ ಬೀಸಿದ ಗಾಳಿ ಮಳೆಗೆ ಮರದ ರೆಂಬೆ ಮುರಿದು ರಸ್ತೆ ಮೇಲೆ ಬಿದ್ದಿತು. ಗ್ರಾಮಸ್ಥರೆ ರೆಂಬೆಗಳನ್ನು ತೆರವು ಮಾಡಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಇಲಾಖೆ ಗಮನಕ್ಕೆ ತರದೇ ಆಲದ ಮರಗಳನ್ನು ತೆರವು ಮಾಡಬಾರದು ಎಂದು ಸೂಚನೆ ನೀಡಿದ್ದರು.
ಈಗ ಹಲವು ತಿಂಗಳಿಂದ ಬಸ್ ನಿಲ್ದಾಣದಲ್ಲಿರುವ 2 ಆಲದ ಮರಗಳ ರೆಂಬೆಗಳು ರಸ್ತೆ ಬದಿಗೆ ಭಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಆಲದ ಮರ ಭಾಗಿರುವ ರಸ್ತೆ ಬದಿ ಅಂಗನವಾಡಿ ಕೇಂದ್ರ, ಹಾಲಿನ ಡೈರಿ ಹಾಗೂ ಭೋಗಾಪುರ, ಕಿರಗಸೂರು, ಚಾಮರಾಜನಗರಕ್ಕೆ ಸಂಚಾರ ಮಾಡುವ ಮುಖ್ಯ ರಸ್ತೆಯಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈಗಾಗಲೇ ಸಾಮಾಜಿಕ ಅರಣ್ಯ ಇಲಾಖೆಗೆ ಮರಗಳನ್ನು ತೆರವು ಮಾಡಿ ಎಂದು ಗ್ರಾಮಸ್ಥರಿಂದ ಮನವಿ ನೀಡಿದ್ದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ.
ಮಳೆಗಾಲ ಆರಂಭವಾಗಿರುವುದರಿಂದ ಮರ ಬಿದ್ದು ಯಾವುದೇ ಆನಾಹುತಗಳು ಉಂಟಾದರೆ ಅರಣ್ಯ ಇಲಾಖೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದರು. ಶಿವಕುಮಾರ್, ಸ್ಟಾಲಿನ್, ನಳಿನ್ಪ್ರಕಾಶ್, ರಂಜನ್, ಕೆಂಪರಾಜು, ನಾಗೇಶ್, ರಾಜು, ವಿಜಯ್, ಪ್ರಭಾಕರ್, ಗಿರೀಶ್, ಮನೋರಾಜು, ಶಿವಣ್ಣ, ಪರಸಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.